Monday, June 30, 2008

ಬಾಸ್

ತಲವಾರು, ಲಾಠಿಗಳ ಮೇಲಿದ್ದ ರಕ್ತದ ಕಲೆಗಳನ್ನು ತೊಳೆದುಕೊಳ್ಳುತ್ತ ಅವರು ಮಾತಾಡುತ್ತಿದ್ದರು :
"ನಮ್ಮ ಕೆಲಸ ಸುಲಭವಾದದ್ದು ಟೆಲಿಕಾಂ ಅಕಾರಿಯಿಂದಾಗಿ. ಅವರು ಆ ಕೇರಿಯ ಅಷ್ಟೂ ಫೋನ್ ಸಂಪರ್ಕಗಳಿಗೆ ಕನೆಕ್ಷನ್ ತಪ್ಪಿಸಿದ್ದರು"
"ಆದರೆ ವಿದ್ಯುತ್ ಇಲಾಖೆಯ ಸಚಿವರು ನೆರವಾಗದಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲ. ಅವರು ನೋಡಿ, ನಮ್ಮ ಕೆಲಸ ಮುಗಿಯುವವರೆಗೂ ಇಡೀ ಗಲ್ಲಿಗೆ ಕರೆಂಟ್ ಬಾರದಂತೆ ನೋಡಿಕೊಂಡರು"
"ಊಹೂಂ, ಇದೆಲ್ಲಾ ಗೃಹ ಸಚಿವರ ಕೃಪೆ. ನಾವು ಎಲ್ಲಾ ಮುಗಿಸಿ ಬಂದರೂ ಇನ್ನೂ ಅಲ್ಲಿಗೆ ಪೊಲೀಸರು ಕಾಲಿಟ್ಟಿಲ್ಲ ನೋಡಿ"
"ಮೂರ್ಖರೇ" ತಂಡದ ಮುಖಂಡ ಗದರಿಸಿದ ; "ನಿಮಗೆಲ್ಲ ಇನ್ನೂ ಅರ್ಥವಾಗಿಲ್ಲ. ಅವರೆಲ್ಲಾ ನಮ್ಮ ಬಾಸ್‌ನ ಮಾತನ್ನು ಪಾಲಿಸಿದರು ಅಷ್ಟೇ !"
"ಯಾರವರು ?"
"ನಮ್ಮ ಮುಖ್ಯಮಂತ್ರಿಗಳು"

Saturday, June 7, 2008

ಪಾಪ

... ಆಮೇಲೆ
ನಾನು ಅವಳನ್ನು ಬಿಗಿಹಿಡಿದು ಕೂಡಿದೆ
ಅವಳು ಅತ್ತರೂ ಬಿಡದೆ.

ಉರಿವ ನನ್ನ ಪಾಪದ ನಿರಂತರ ಸುಪರ್ದಿಗೆ
ನನ್ನ ಬಿಟ್ಟು ಅವಳು ತೆರಳಿದಾಗ
ನಾನು ಅನಾಥನಂತೆ ನಿಂತು ನೋಡಿದೆ

ಅವಳ ಬಿಕ್ಕುವಿಕೆಗೆ ಕೊನೆ ಎಲ್ಲೋ ಇದ್ದಿರಬಹುದು
ನನ್ನೊಳಗಿನ ದಹನಕ್ಕೆ ಅಂತ್ಯವೇ ಇರಲಿಲ್ಲ

ಆ ಘಳಿಗೆಯ ಅವಳ ಉರಿವ ದೃಷ್ಟಿಗಳಿಂದ
ಕೆದರಿದ ಕೂದಲ ಜ್ವಾಲೆಗಳಿಂದ
ಮುಕ್ತನಾಗುವ ತಡಕಾಟದಲ್ಲಿ
ನಾಶವಾದವು ನನ್ನ ನಾಳೆಗಳು

ಇದೀಗ ನನ್ನ ಮೇಲೆ ನಡೆದಿರುವ
ಅಂಥ ನಿನ್ನೆಗಳ ಕರಾಳ ಕೈಗಳ
ಅಮಾನುಷ ಹಲ್ಲೆಯ ಹೇಗೆ ವಿವರಿಸಲಿ ?