Friday, September 19, 2008

ಒಲಿಂಪಿಕ್‌ನಲ್ಲಿ ಕಾಣದ ಭಾಮಿನಿಯರು





ಹಿಂಸೆ ದುರ್ಬಲರ ಅಸ್ತ್ರ ಅಂತ ಮಹಾತ್ಮರು ತುಂಬ ಹಿಂದೆಯೇ ಹೇಳಿದ್ದರು ; ಆದರೆ ಹಿಂಸೆ ಯಾವಾಗಲೂ ದುರ್ಬಲರ ಅಸ್ತ್ರವೇನಲ್ಲ. ಅದು ಅಕಾರದಲ್ಲಿರುವವರು ತಮ್ಮಿಂದ ಕೆಳಗಿರುವವರ ಮೇಲೆ ಅಪತ್ಯ ಸ್ಥಾಪಿಸಲು ; ಸಾಮಾಜಿಕವಾಗಿ ಸ್ಥಾಪಿತ ಸ್ಥಾನದಲ್ಲಿರುವವರು ಇತರರ ಮೇಲೆ ಹಿಡಿತ ಸಾಸಲು ಬಳಕೆಯಾಗುವುದೂ ಹೌದು. ಇದಕ್ಕೆ ಅತಿ ಸುಲಭವಾಗಿ ದೊರೆಯುವ ಉದಾಹರಣೆ ಗಂಡು ಹೆಣ್ಣಿನ ಮೇಲೆ ಸಾಸುವ ಆಡಳಿತ ಮತ್ತು ಅದನ್ನು ಹೊಂದಲು ಪ್ರಯೋಗಿಸುವ ನಾನಾ ಬಗೆಯ ಹಿಂಸೆಗಳು.
ಈ ಹಿಂಸೆಯ ಅನೇಕ ಮುಖಪರದೆಗಳನ್ನು ಸರಿಸುವ ಎರಡು ಪುಸ್ತಕಗಳನ್ನು ಮೇಫ್ಲವರ್ ಮೀಡಿಯಾ ಹೌಸ್‌ನ ಪ್ಯಾಪಿರಸ್ ಪ್ರಕಾಶನ ಪ್ರಕಟಿಸಿದೆ. ಒಂದು- ಲೀಲಾ ಸಂಪಿಗೆಯ ‘ಒಲಿಂಪಿಕ್ಸ್ ಎಂಬ ಕೆಂಪು ದೀಪ’, ಇನ್ನೊಂದು ಚೇತನಾ ತೀರ್ಥಹಳ್ಳಿಯ ‘ಭಾಮಿನಿ ಷಟ್ಪದಿ’.
ಆಧುನಿಕ ಸ್ತ್ರೀ ಉದ್ಯೋಗ ಹಾಗೂ ಮನೆ ಎರಡರಲ್ಲೂ ತನ್ನ ಅಸ್ತಿತ್ವ ಸಾಸಲು ಗಂಡಸಿಗಿಂತ ಹಲವು ಪಟ್ಟು ಹೆಣಗಬೇಕಾಗಿ ಬಂದಿರುವುದು ; ಉಪಭೋಗವಾದದ ವಿಜೃಂಭಣೆಯ ಹಿನ್ನೆಲೆಯಲ್ಲಿ ಆಕೆ ಒಂದು ಸರಕಾಗಿ ಮಾರ್ಪಟ್ಟಿರುವುದು ; ಹೆಸರಿಗೆ ಎಲ್ಲ ಬಗೆಯ ರಕ್ಷಣೆಗಳಿದ್ದರೂ ನಿಜಕ್ಕೂ ಆಕೆಗೆ ಯಾವ ರಕ್ಷಣೆಗಳೂ ಇಲ್ಲದಿರುವುದು ; ‘ಮಾತೆಯರು’ ಎಂದು ಬಾಯ್ತುಂಬ ಕರೆಯುವ, ಆದರೆ ಅವಕಾಶ ಸಿಕ್ಕಿದಲ್ಲೆಲ್ಲ ಪದ್ಮಪ್ರಿಯರನ್ನೂ ಜಯಲಕ್ಷ್ಮಿಯರನ್ನೂ ಸೃಷ್ಟಿಸುವ ಆತುರ ಹೊಂದಿರುವ ಮಂದಿ ರಾಜ್ಯದಲ್ಲಿ ಅಕಾರಕ್ಕೆ ಬಂದಿರುವುದು- ಇಂಥ ಸನ್ನಿವೇಶದಲ್ಲಿ ಕನ್ನಡದ ಸಂದರ್ಭದಲ್ಲಿ ಈ ಎರಡು ಪುಸ್ತಕಗಳು ಹೊರಬಂದಿರುವುದು ಕಾಕತಾಳೀಯವಷ್ಟೇ ಅಂತ ನಾನು ತಿಳಿಯಲಾರೆ.
ಈ ಎರಡೂ ಕೃತಿಗಳು ಗಂಡು ಹೆಣ್ಣಿನ ಮೇಲೆ ಪ್ರಯೋಗಿಸುವ ಹಿಂಸೆಯ ಎರಡು ಮುಖಗಳನ್ನು ಪ್ರಕಟಿಸುತ್ತವೆ ; ಅದರಲ್ಲಿ ಒಂದು, ಗಂಡು ಒಂದು ಸಮುದಾಯವಾಗಿ ತನ್ನ ದೈಹಿಕ ಸುಖಕ್ಕಾಗಿ ಹೆಣ್ಣು ಸಮುದಾಯವನ್ನು ತನಗೆ ಬೇಕಾದಂತೆ ಮಾರ್ಪಡಿಸಿರುವುದು, ಅಂದರೆ ವೇಶ್ಯಾ ಸಮುದಾಯವಾಗಿ ಅಭಿವೃದ್ಧಿಪಡಿಸಿರುವುದು. ಇನ್ನೊಂದು, ಹೀಗೆ ನೇರ ಮಾರ್ಪಡಿಸುವಿಕೆಯ ಅವಕಾಶವಿಲ್ಲದಲ್ಲಿ, ಮೇಲ್ನೋಟಕ್ಕೆ ತೀರ ಸಭ್ಯವೂ ಸಾಮಾಜಿಕವಾಗಿ ಒಪ್ಪಿತವೂ ಎನಿಸುವ ಸಾಂಸಾರಿಕ- ಗೃಹ ಹಿಂಸೆಯ ಮಾರ್ಗವನ್ನು ಹಿಡಿದಿರುವುದು. ಇದರಲ್ಲಿ ‘ಒಲಿಂಪಿಕ್ಸ್’ ಮೊದಲನೆಯದು- ಸಾಮಾಜಿಕ ಹಿಂಸೆಯ ಅನಾವರಣ ; ‘ಭಾಮಿನಿ’ ಎರಡನೆಯದು- ಗೃಹ ಹಿಂಸೆಯ ತೋರುಗನ್ನಡಿ.
*
ಸಾವಿರಾರು ಕ್ರೀಡಾಪಟುಗಳು, ಲಕ್ಷಾಂತರ ಕ್ರೀಡಾಪ್ರೇಮಿಗಳು ಸಂಗಮಿಸುವ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯ ಜತೆಗೆ ಕಾಮಕ್ರೀಡೆ ಕೂಡ ತನ್ನ ಆಟವನ್ನು ಎಂಥ ಬೃಹತ್ ಅನಿಸುವ ರೀತಿಯಲ್ಲಿ ಆಡುತ್ತದೆ ಎಂಬ ವಿವರವಾದ ಚಿತ್ರಣ ಲೀಲಾ ಸಂಪಿಗೆಯ ಪುಸ್ತಕದಲ್ಲಿದೆ ; ಕನ್ನಡದಲ್ಲಿ ಕುಸುಮಾ ಶ್ಯಾನುಭಾಗ್ ಅವರಂಥ ಒಂದಿಬ್ಬರನ್ನು ಬಿಟ್ಟರೆ ಬೇರ್‍ಯಾರೂ ಕಾಲಿಡದ ಕ್ಷೇತ್ರದಲ್ಲಿ ಓಡಾಡಿ ಬೀದಿ ಹೆಣ್ಣು ಮಕ್ಕಳ ನೋವುಗಳನ್ನು ಕಂಡವರು ಅವರು ; ಆದ್ದರಿಂದ ಈ ವಿಷಯದ ಬಗ್ಗೆ ಅಕಾರಯುತವಾಗಿ ಬರೆಯಬಲ್ಲರು.
ಪುಸ್ತಕ ಪುಟ್ಟದಾಗಿದೆ ; ಆದರೆ ಒಲಿಂಪಿಕ್ಸ್‌ನ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ವೇಶ್ಯಾವಿಲಾಸದ ವಿರಾಟ್ ದರ್ಶನವನ್ನೇ ಮಾಡಿಸುತ್ತದೆ. ಇಂಥ ವಿಚಾರದಲ್ಲಿ ಬರೆಯುವವರು ಓದುಗರ ಒಲುಮೆಗಾಗಿ ರೋಚಕ ಶೈಲಿ ಹಾಗೂ ವಿವರಗಳಿಗೆ ಮೊರೆ ಹೋಗುವುದು ಸಾಮಾನ್ಯ ; ಆದರೆ ಈ ಕ್ಷೇತ್ರದಲ್ಲಿ ಅಂತಃಕರಣವುಳ್ಳವರಿಗೆ ಅದು ಸಹ್ಯವೆನಿಸಲಾರದು, ಲೀಲಾ ಅವರಿಗೆ ಅನಿಸಿಲ್ಲ.
ಅದಕ್ಕಿಂತ ಮುಖ್ಯವಾಗಿ, ‘ಲೈಂಗಿಕತೆಯ ರಾಜಕೀಯ’ ಅಂತೇನು ಹೇಳುತ್ತೇವಲ್ಲ, ಅದರ ಅರ್ಥ, ಸ್ವರೂಪ ಈ ಕೃತಿಯಿಂದ ಗೊತ್ತಾಗುತ್ತದೆ. ಈ ದಂಧೆಯ ಭಯಾನಕ, ವಿಸ್ತೃತ ರಾಜಕೀಯ ಮುಖ ಈ ಕೆಳಗಿನ ಕೆಲವು ವಿವರಗಳಿಂದಲೇ ಗೊತ್ತಾಗಬಹುದು :
“ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಮತ್ತು ಇಂಟರ್‌ನೆಟ್ ಜಾಲದಲ್ಲಿ ವೈವಿಧ್ಯಮಯ, ದೃಢಕಾಯದ, ಹದಿಹರೆಯದ, ಸುಂದರ ಹೆಣ್ಣುಗಳ ಲಭ್ಯತೆಯ ಬಗ್ಗೆ ಜಾಹಿರಾತು ಪ್ರಕಟವಾದವು. ಸೆಕ್ಸ್ ಉದ್ಯಮ ಕೋಟ್ಯಂತರ ರೂ. ವಹಿವಾಟು ನಡೆಸಿತು. ಇದರಿಂದ ಆಸ್ಟ್ರೇಲಿಯದ ಬೊಕ್ಕಸವೂ ತುಂಬಿತು !"
“ವೇಶ್ಯಾವಾಟಿಕೆ ಈಗ ಜಾಗತಿಕ ಉದ್ಯಮ. ಅಪಾರ ಪ್ರಮಾಣದ ಹಣ ಹೂಡಿಕೆ, ಲಾಭಕೋರತನ ಇಲ್ಲಿ ಸಾಗಿದೆ. ಹಲವು ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರವಾಗಿದ್ದರೆ, ಹಲವೆಡೆ ಲೈಂಗಿಕ ವೃತ್ತಿ ಹೆಸರಿನಲ್ಲಿ ಕಾನೂನು ಮಾನ್ಯತೆ ಪಡೆದಿದೆ. ಈ ಸೆಕ್ಸ್‌ಟ್ರೇಡ್ ಎನ್ನುವುದೇ ದೊಡ್ಡ ಭೂಗತ ಜಗತ್ತು."
“ಇಂಡೋನೇಷ್ಯಾದ ೧.೫ ಶೇಕಡ ಮಹಿಳೆಯರು ವೇಶ್ಯಾವೃತ್ತಿಯಲ್ಲಿದ್ದಾರೆ. ಮಲೇಷಿಯಾ, ಫಿಲಿಪ್ಪೈನ್ಸ್, ಥೈಲ್ಯಾಂಡಿನಲ್ಲೂ ಇಷ್ಟೇ ಪ್ರಮಾಣದ ಮಹಿಳೆಯರು ಈ ವೃತ್ತಿಯಲ್ಲಿದ್ದು ರಾಷ್ಟ್ರೀಯ ಆದಾಯದ ಶೇ. ೧೪ ಭಾಗವನ್ನು ಪೂರೈಸುತ್ತಾರೆ. ಥೈಲ್ಯಾಂಡಿನಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಶಸ್ತ್ರ ಕಳ್ಳಸಾಗಣೆಯ ಬಳಿಕ ಅತ್ಯಂತ ಲಾಭದ ದಂಧೆ ಎಂದರೆ ವೇಶ್ಯಾವಾಟಿಕೆ. ರಾಷ್ಟ್ರೀಯ ಮಹಿಳಾ ಆಯೋಗದ ವರದಿ ಪ್ರಕಾರ ಭಾರತದಲ್ಲೂ ವಾರ್ಷಿಕ ೨೦೦ರಿಂದ ೫೦೦ ಕೋಟಿ ಆದಾಯ ಇದರಿಂದ ಸಲ್ಲುತ್ತದೆ."
“ಮಾವೋ ಕಾಲದ ಸಾಂಸ್ಕೃತಿಕ ಕ್ರಾಂತಿ ಚೀನಾದಲ್ಲಿ ನೈತಿಕ ಪ್ರಶ್ನೆಯನ್ನು ಮುಖ್ಯವಾಗಿರಿಸಿಕೊಂಡಿತ್ತು. ಲೈಂಗಿಕತೆ ಬಗ್ಗೆ ಬಹಿರಂಗ ಚರ್ಚೆ ಸಾಧ್ಯವೇ ಇರಲಿಲ್ಲ. ಆದರೆ ಇದೀಗ ಜಾಗತೀಕರಣಕ್ಕೆ ತೆರೆದುಕೊಂಡಿರುವ ಚೀನಾದ ನಗರ ಪ್ರದೇಶದ ಚಿತ್ರಣ ಬದಲಾಗಿದೆ. ಲೈಂಗಿಕ ಉದ್ಯಮ ಅಲ್ಲಿನ ಆರ್ಥಿಕತೆಗೆ ಶೇ. ೬ ವರಮಾನ ತಂದುಕೊಡುತ್ತಿದೆ."
ವಿವರಗಳನ್ನು ನೀಡುವ ಜತೆಗೆ ಲೀಲಾ, ಮಾನವ ಸಾಗಾಟ ಮುಂತಾದವುಗಳ ಬಗ್ಗೆ ಚರ್ಚಿಸುತ್ತಾರೆ ; ಇವೆಲ್ಲವುಗಳನ್ನು ತಡೆಯಲು ಅಗತ್ಯವಾದ ಕ್ರಮಗಳ ಬಗ್ಗೆ ಕೂಡ ಚರ್ಚಿಸುತ್ತಾರೆ. ಕನ್ನಡದಲ್ಲಿ ಮುಂದೆ ಲೈಂಗಿಕ ವೃತ್ತಿಯ ಬಗೆಗೆ ಮಾತನಾಡುವವರು, ಬರೆಯುವವರು ಅವಶ್ಯವಾಗಿ ಗಮನಿಸಬೇಕಾದ ಕೃತಿ ಇದು.
*
ಟಾಲ್‌ಸ್ಟಾಯ್‌ನ ಒಂದು ಜನಪ್ರಿಯ ಸೂಕ್ತಿಯನ್ನು ಇಲ್ಲಿ ನೆನೆಯಬಹುದಾದರೆ, ಅದು ಹೀಗಿದೆ- ‘ಎಲ್ಲ ಸುಖೀ ಕುಟುಂಬಗಳೂ ಒಂದೇ ಥರ ; ಆದರೆ ಪ್ರತಿಯೊಂದು ಕುಟುಂಬವೂ ಅದರದೇ ಆದ ರೀತಿಯಲ್ಲಿ ದುಃಖಿ.’ ಭಾರತೀಯ ಸಂದರ್ಭದಲ್ಲಿ ಈ ದುಃಖದ ದೇಖರೇಖಿ ಯಾವಾಗಲೂ ಹೆಣ್ಣಿಗೆ. ಪ್ರೇಮವನ್ನು ಪದೇ ಪದೇ ಸಾಬೀತು ಪಡಿಸಬೇಕಾದ ಗಂಡು ; ಎಂದೂ ಎಲ್ಲೂ ಇಲ್ಲದ ಆದರ್ಶ ಪ್ರೇಮಕ್ಕಾಗಿ ನೋಯುವ ಹೆಣ್ಣು ಜತೆಯಾಗಿಬಿಟ್ಟರಂತೂ ಆ ದಾಂಪತ್ಯ ನರಕ. ಈ ನರಕದ ಮಗ್ಗುಲುಗಳಿಂದ ಎತ್ತಿಕೊಂಡ ಹೂಗಳೇ ಈ ಭಾಮಿನಿ ಷಟ್ಪದಿ.
ಚೇತನಾರ ಬರಹಗಾರಿಕೆಯ ಬಗ್ಗೆ ಎರಡು ಮಾತಿಲ್ಲ ; ಅವಶ್ಯವಿಲ್ಲದಿದ್ದಲ್ಲಿ ಅವರು ಉದ್ದ ವಾಕ್ಯಗಳನ್ನು ಹಾಕಲು ಹೋಗುವುದಿಲ್ಲ. ಕೆಲವು ವಾಕ್ಯಗಳು ಎರಡೇ ಪದಗಳಿಗೆ ಮುಗಿಯುತ್ತವೆ. ಹೆಣ್ಣಿನ ಮನೋಧರ್ಮಕ್ಕೆ ಸಾಮಾನ್ಯವಾಗಿ ವಿರುದ್ಧವಾದ ಗುಣ ಇದು ; ಆದರೆ ಈ ಬಗೆಯ ಶೈಲಿ ಮತ್ತು ಕಾವ್ಯಾತ್ಮಕತೆ ವೈದೇಹಿ ಅವರಲ್ಲಿ ಕೂಡ ಕಾಣುತ್ತದಾದ್ದರಿಂದ ತೀರ ಅಪರೂಪ ಅಂದುಕೊಳ್ಳಬೇಕಿಲ್ಲ.
ನರೇಂದ್ರ ಪೈ ಗುರುತಿಸಿದಂತೆ, ಗಂಡಿನಂತೆ ಹೆಣ್ಣು ಅನುಭವ ಲೋಕವೊಂದನ್ನು ಹುಡುಕಿಕೊಂಡು ಹೋಗದಿರಲು ಆಕೆಯ ಭೌತಿಕ ಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿಗಳು ಕೂಡ ಕಾರಣ. ಆದರೆ ಆಕೆ ಅನುಭವದ ಒಳಲೋಕವೊಂದನ್ನು ತನಗೆ ತಾನೆ ಸೃಷ್ಟಿಸಿಕೊಳ್ಳುವುದರಿಂದ, ಗಂಡಿನ ಜತೆ ಅದನ್ನು ಸಮೀಕರಿಸಬೇಕಿಲ್ಲ. ಹೀಗೆ ಪ್ರತ್ಯೇಕಿಸುವುದು ಕೂಡ ಲೇಖಕಿಯರಿಗೆ ಅನ್ಯಾಯ ಮಾಡಲು ಹಿರಿಯ ವಿಮರ್ಶಕರು ಕಂಡುಕೊಂಡಿದ್ದ ಒಂದು ದಾರಿ.
ಚೇತನಾ ಅವರ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯಲು ನನಗೆ ಇಷ್ಟ. ಆದರೆ ಜೋಗಿ, ಹುಳಿಯಾರ್, ನರೇಂದ್ರ ಪೈ ಸೇರಿದಂತೆ ಎಲ್ಲರೂ ಈಗಾಗಲೇ ಅದನ್ನು ಸಾಕಷ್ಟು ಹೊಗಳಿದ್ದಾಗಿದೆ. ಚೇತನಾ ಕನ್ನಡದ ಒಳ್ಳೆಯ ಲೇಖಕಿಯರಲ್ಲಿ ಒಬ್ಬರು ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಅವರ ಬರಹದ ಬಗೆಗೆ ನನಗಿರುವ ಕೆಲವು ತಕರಾರುಗಳನ್ನು ಇಲ್ಲಿ ದಾಖಲಿಸಲು ಬಯಸುತ್ತೇನೆ.
ಒಂದು : ಹಿಂಸೆಯಲ್ಲಿ ರಮಿಸುವ, ಹಿಂಸೆಯಲ್ಲೇ ವಿರಮಿಸುವ ಗುಣ. ಇದು ಎಂ.ವ್ಯಾಸರಲ್ಲಿ ತುಂಬಾ ಇತ್ತು. ಅವರು ಇದರಿಂದ ಎಂದೂ ಮೇಲೆ ಬರಲೇ ಇಲ್ಲ. ಚೇತನಾ ಇದನ್ನು ಮೀರಬಲ್ಲರೋ ಎಂಬುದು ಇನ್ನೂ ಸ್ಪಷ್ಟವಿಲ್ಲ ; ಮೀರಬೇಕೇ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ.
ಎರಡು : ಪುರಾಣದ ಪಾತ್ರಗಳ ಭಂಜನೆ. ಇದರಿಂದ ಹೊಸ ಅರಿವು ಉಕ್ಕುವಂತಿದ್ದರೆ, ಹೊಸ ಗ್ರಹಿಕೆಯನ್ನು ನನಗೆ ಅದು ನೀಡುತ್ತದಾದರೆ ನಾನು ಸ್ವಾಗತಿಸಬಲ್ಲೆ. ಇಲ್ಲವಾದರೆ ಇದರಿಂದ ಪ್ರಯೋಜನವೇನು ? ಯಶೋಧರೆ, ದ್ರೌಪದಿ, ಅಹಲ್ಯೆ ಎಲ್ಲರ ಬಗ್ಗೆಯೂ ಚೇತನಾಗಿಂತ ಒಂದು ತಲೆಮಾರು ಹಿಂದಿನ ಲೇಖಕಿಯರು ಇನ್ನಷ್ಟು ಪ್ರಖರವಾಗಿ ಬರೆದಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು. ಉದಾಹರಣೆಗೆ- ಇರಾವತಿ ಕರ್ವೆ, ಪ್ರತಿಭಾ ನಂದಕುಮಾರ್.
ಮೂರು : ಗಂಡು ಶೋಷಕ, ಹೆಣ್ಣು ಶೋಷಿತೆ ಎಂಬ ಸ್ಥಾಪಿತ ಮಾದರಿಗೆ ಬೀಳುವ ಭಯ. ಇದು ಜನಪ್ರಿಯವಾದುದೂ ಆಗಿದೆ ; ಪೊಲಿಟಿಕಲಿ ಕರೆಕ್ಟ್ ಆಗಿಯೂ ಇದೆ. ಆದರೆ ಇದೇ ಗ್ರಹಿಕೆಯೊಂದಿಗೆ ನಾವು ಇನ್ನಷ್ಟು ಮುಂದೆ ಹೋಗಲು ಸಾಧ್ಯವಿಲ್ಲ. ದಾಂಪತ್ಯದ ನರಕ ಎಲ್ಲರಿಗೂ ಒಂದೇ ; ಆಧುನಿಕ ಸಂದರ್ಭದಲ್ಲಿ ಹೆಚ್ಚಿನ ಸಲ ಗಂಡಿನೊಂದಿಗೆ ಹೆಣ್ಣೂ ಈ ನರಕಕ್ಕೆ ಪಾಲುದಾರಳು. ಗಂಡಿನ ಸೋಲು, ನೋವು, ಯಾತನೆಗಳನ್ನು ಕಾಣುವ ಕಣ್ಣು ಬರಹಗಾರರಿಗೆ ಮಂದವಾಗಕೂಡದು.
ನಾಲ್ಕು : ಅಷ್ಟೊಂದು ಬರಹಗಳನ್ನು ಓದಿದ ಮೇಲೆ, ಇಲ್ಲಿನ ಯಾವ ಪಾತ್ರವೂ ನನ್ನ ಚಿತ್ತ ಭಿತ್ತಿಯ ಮೇಲೆ ಅಚ್ಚೊತ್ತಿ ನಿಲ್ಲಲಿಲ್ಲವಲ್ಲಾ ಎಂದನಿಸಿದ್ದು ನಿಜ. ಅದಕ್ಕೆ ಕಾರಣವೇನು ಎಂಬ ಬಗ್ಗೆ ಆಲೋಚಿಸಿದೆ ; ನನಗೆ ತಿಳಿದಂತೆ ಬಹುತೇಕ ಬರಹಗಳ ಬೋನ್ಸಾಯ್ ಆಕೃತಿ ಇದಕ್ಕೆ ಕಾರಣ. ವೇದವ್ಯಾಸರು ಮೂವತ್ತು ಸಾವಿರ ಶ್ಲೋಕಗಳಲ್ಲಿ ಚಿತ್ರಿಸಿದ ದ್ರೌಪದಿಯನ್ನು ಐದು ಪ್ಯಾರಾಗಳಲ್ಲಿ ಬೇರೆ ರೀತಿ ಕೆತ್ತಿ ನಿಲ್ಲಿಸಬಹುದೆ ? ಹನಿಗವಿತೆಗಳು ನಕ್ಕು ಸುಮ್ಮನಾಗುವುದಕ್ಕಷ್ಟೇ ಯಾಕೆ ಸೀಮಿತವಾಗಿವೆ ? ಈ ಮುಂತಾದ ಪ್ರಶ್ನೆಗಳೂ ಇದರ ಜತೆಗೇ ಹುಟ್ಟುತ್ತವೆ. ಸವುಡು ಸಿಕ್ಕಿದರೆ, ಇದರ ಬಗ್ಗೆ ವಿಸ್ತಾರವಾಗಿ ಇನ್ನೊಮ್ಮೆ ಬರೆದೇನು.

Saturday, September 6, 2008

ವ್ಯಾಸಂಗ !


ಕತೆಗಾರ ವ್ಯಾಸರು ತಮ್ಮ ಕೂದಲನ್ನು ಹಿಂದಕ್ಕೆ ಕೆದರಿ ಬಿಟ್ಟುಕೊಂಡು ಒಂದು ಕೋನದಿಂದ ನೋಡಿದಾಗ ಬೆಂದ್ರೆಯವರಂತೆ ಕಾಣಿಸುತ್ತಾ, ಪದೇ ಪದೇ ನನ್ನ ಕನಸಿನಲ್ಲಿ ಇಣುಕುತ್ತಿದ್ದರು. ನಾನು ಅಳುಕುತ್ತಾ “ವ್ಯಾಸರೇ ಇನ್ನೊಂದು ಕತೆ ಹೇಳಿ" ಎಂದು ವ್ಯಾಕುಲನಾಗಿ ಅವರ ಹಿಂದೆ ಅಲೆಯುತ್ತಿದ್ದೆ. ಅವರು ನನ್ನ ಕೈಯಿಂದ ತಪ್ಪಿಸಿಕೊಂಡು ದುರ್ಗಾಪುರದ ಸಂದುಗೊಂದುಗಳಲ್ಲಿ ಮಾಯವಾಗುತ್ತಿದ್ದರು.

ಇನ್ನೊಂದು ಕನಸಿನಲ್ಲಿ ಅವರು ಶಂಕರೀನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ವಿಘ್ನನಿವಾರಕ ಗಣಪತಿ ಬಂದು “ವ್ಯಾಸರೇ ನೀವು ಮಹಾಭಾರತ ಹೇಳುತ್ತೇನೆಂದು ಹೇಳಿ ಎಲ್ಲಿ ಮಾಯವಾದಿರಿ. ನಾನು ಅದನ್ನು ಬರೆಯಲು ಕಾದು ಕುಳಿತಿದ್ದೇ ಬಂತು. ಈಗ ಸಿಕ್ಕಿದಿರಲ್ಲಾ ಕತೆ ಹೇಳಿ" ಎಂದು ಬೆನ್ನು ಹತ್ತಿದ. ವ್ಯಾಸರು ಗಾಬರಿಯಾಗಿ, “ಮಾರಾಯ ನಾನು ಮಹಾಭಾರತದ ವ್ಯಾಸನಲ್ಲ. ನನ್ನ ಭಾರತವೇ ಬೇರೆ, ನನ್ನ ಭಾರಗಳೇ ಬೇರೆ, ನನ್ನ ಕತೆಗಳೇ ಬೇರೆ. ನನ್ನ ದುಸ್ವಪ್ನಗಳನ್ನು ನೀನು ಬರೆಯಲಾರೆ" ಎಂದು ಗಣೇಶನಿಂದ ಪಾರಾಗಲು ದಾರಿ ಹುಡುಕುತ್ತಾ ಇದ್ದರು.

ಐದಾರು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನನ್ನ ಕವನ ಸಂಕಲನ ಅವರ ಕೈಗೆ ಸಿಕ್ಕಿ, ‘ಕೇರನ ಕವನಗಳು ಚೆನ್ನಾಗಿವೆಯಲ್ಲಾ’ ಎಂದು ಅವರಿವರ ಬಳಿ ಹೇಳಿ, ಪತ್ರ ಬರೆದಿದ್ದರು. ಆಮೇಲೆ ಹೇಗೋ ನನ್ನ ಪೋನ್ ನಂಬರ್ ಸಂಪಾದಿಸಿಕೊಂಡು ಒಂದು ಮಧ್ಯಾಹ್ನ ರಿಂಗ್ ಮಾಡಿದ್ದರು. ನಾನು ವ್ಯಾಸರ ಫೋನೆಂದರಿಯದೆ ರಿಸೀವ್ ಮಾಡಿ, ಅವರು ಪರಿಚಯ ಮಾಡಿಕೊಂಡು ಮಾತಾಡಿದಾಗ ದಂಗಾಗಿ ಹೋಗಿದ್ದೆ. “ಚೆನ್ನಾಗಿ ಬರೆದಿದ್ದಿ ಮಾರಾಯ ಇನ್ನೂ ಬರಿ. ನಿನ್ನ ‘ಪಾಪ’ ಕವನ ತುಂಬಾ ಇಷ್ಟವಾಯಿತು" ಅಂತೆಲ್ಲಾ ಹೇಳಿ, ಪದ್ಯದ ಸಾಲು ಸಾಲುಗಳನ್ನೂ ಕೋಟ್ ಮಾಡಿ ನಾನೇ ಪಾಪಿ ಅನ್ನಿಸುವಂತೆ ಮಾಡಿದ್ದರು. ಅಂಥವರ ಜತೆ ನಾನೇನು ಮಾತಾಡಲಿ ಎಂದು ತೊದಲಿ ಫೋನ್ ಇಟ್ಟ ಬಳಿಕ ನಿಜಕ್ಕೂ ನಾನು ಪಾಪಿ ಅನ್ನಿಸಲು ಶುರುವಾಗಿತ್ತು.

ಆಮೇಲೆ ಅವರ ಸ್ವಗತದಂಥ ಧ್ವನಿಯ ಮಂದ್ರಸ್ಥಾಯಿಗೂ ಅವರ ಕತೆಗಳಿಗೂ ಏನೋ ಸಂಬಂಧವಿದೆ ಅನ್ನಿಸಲು ತೊಡಗಿತ್ತು. ಅಷ್ಟು ಹೊತ್ತು ನನ್ನ ಜತೆ ಅವರು ಮಾತಾಡಿದ್ದರೂ ಅದು ತಮಗೆ ತಾವೇ ಮಾತಾಡಿಕೊಂಡಂತೆ ಇತ್ತಲ್ಲವೆ ಅನ್ನಿಸಿ ಕುತೂಹಲವಾಗಿ, ಅವರ ಕತೆಗಳ ದಾರುಣ ಅನುಭವಗಳೂ ದುಸ್ವಪ್ನದಂಥ ಬದುಕುಗಳೂ ಚಿಂತಾಮಗ್ನ ಪಾತ್ರಗಳೂ ಸದಾ ಉರಿಯುವ ಭಾವಗಳೂ ನೆನಪಿಗೆ ಬಂದಿದ್ದವು.

ಆಮೇಲೆ ಅವರು ಆಗಾಗ ಫೋನ್ ಮಾಡುತ್ತಿದ್ದರು ; ನಾನೂ ಮಾಡುತ್ತಿದ್ದೆ. ಒಮ್ಮೊಮ್ಮೆ ತಿಂಗಳುಗಟ್ಟಲೆ ನಾನು ಫೋನ್ ಮಾಡಲು ಮರೆತಾಗ ಅವರೇ ಲೈನ್ ಹಚ್ಚುತ್ತ ನನ್ನಲ್ಲಿ ಪಾಪಪ್ರಜ್ಞೆ ಮೂಡಿಸುತ್ತಿದ್ದರು. ಮನೆಗೆ ಯಾವಾಗ ಬರುತ್ತೀರಿ ಎಂದು ದುಂಬಾಲು ಬೀಳುತ್ತಿದ್ದರು. ನಾನು ಅವರಿಂದ ಪಾರಾಗುವ ದಾರಿ ಹುಡುಕುತ್ತಿದ್ದೆ. ಅವರು ತಮ್ಮ ‘ಸ್ನಾನ’ ಕತೆ ಓದಿ ಆತ್ಮಹತ್ಯೆ ಮಾಡಿಕೊಂಡ ವಿರಾಗಿಯ ಬಗೆಗೂ, ತಾವಾಗಿ ತಮ್ಮ ಬಳಿ ಬಂದು ಕತೆ ಬರೆಸಿಕೊಂಡ ವಿಕ್ಷಿಪ್ತ ಪಾತ್ರಗಳ ಬಗೆಗೂ ಹೇಳಿ ಭಯವನ್ನೂ ಕುತೂಹಲವನ್ನೂ ಏಕಕಾಲದಲ್ಲಿ ಹುಟ್ಟಿಸುತ್ತಿದ್ದರು.

ಕಾಸರಗೋಡಿನಲ್ಲಿ ಮಿತ್ರ ಗೋಪಾಲಕೃಷ್ಣನ ಮದುವೆಗೆ ಹೋದಾಗ ನಿಜಕ್ಕೂ ಅವರು ಎದುರು ಬಂದೇ ಬಿಟ್ಟರು. ಮನೆಗೆ ಯಾಕೆ ಬರಲಿಲ್ಲ ಅಂತ ಬೆಂಡ್ ತೆಗೆಯುತ್ತಾರೆ ಅಂತ ಭಯವಾಗಿ ದೇವಸ್ಥಾನದ ಸುತ್ತ ಸುತ್ತಿ ಪರಾರಿಯಾಗುವ ಹುನ್ನಾರ ಮಾಡಿದರೆ ಅದನ್ನೆಲ್ಲ ವಿಫಲಗೊಳಿಸಿ ನಗುತ್ತಾ ಎದುರಿಗೆ ಬಂದು ಹಿಡಿದುಕೊಂಡೇ ಬಿಟ್ಟರು. ನೂರಾರು ವರ್ಷಗಳ ಆತ್ಮೀಯತೆ ಹೊಂದಿರುವವರ ಥರ ಗಂಟೆಗಟ್ಟಲೆ ಮಾತಾಡಿದರು.

ಒಂದು ಪತ್ರದಲ್ಲಿ ಅವರು ಹೀಗೆ ಬರೆದಿದ್ದರು : “...ಇತ್ತೀಚೆಗಿನ ಕವಿಗಳು ಎಂದರೆ ನನಗೆ ತುಂಬಾ ಇಷ್ಟ. ಸಂಧ್ಯಾದೇವಿಯವರ ‘ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ’ಓದಿದೆ. ಹಾಡಲಾಗದ ಗಜಲ್‌ಗಳಂತೆ, ಹತಾಶೆಯೇ ತೃಪ್ತಿ ಎಂಬಂತೆ, ಕವಿತೆಗಳನ್ನು ಬರೆದಿದ್ದಾರೆ. ಕೆಲವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಸಿಕ್ಕಿದ್ದರು. ‘ನಿಮ್ಮ ಕೃತಿ ಓದಿದೆ. ರಾತ್ರಿಯಿಡೀ ಅಳುತ್ತಿದ್ದೆ’ ಎಂದರು. ಆಮೇಲೆ ಅನೇಕ ಪತ್ರಗಳನ್ನು ಬರೆದರು. ಮೀರಾ ಭಜನೆಗಳಂತಿರುವ ಈ ಕವಿತೆಗಳನ್ನು ಓದಿದರೆ ಮನಸ್ಸು ಅರಳುತ್ತಿರುತ್ತದೆ. ಬಾಡದ ಹೂವಿನಂತೆ. ನಿಮ್ಮ ಸಂಕಲನದಲ್ಲಿ ಜಯಂತ ಕಾಯ್ಕಿಣಿ ಮುನ್ನುಡಿ ನಿಮ್ಮನ್ನು ಸರಿಯಾಗಿ ಪರಿಚಯಿಸುತ್ತದೆ. ಜಯಂತ ನನ್ನ ಇನ್ನೊಂದು ಜೀವದ ಹಾಗೆ. ಅವರ ಒತ್ತಾಯದಿಂದ ನಾನು ಮತ್ತೆ ಬರೆಯಲಾರಂಭಿಸಿದೆ..."

ಹೀಗೆ ಕತೆಗಳು, ಪತ್ರಗಳು, ಮಾತುಗಳ ಮೂಲಕ ನನ್ನೊಳಗೆ ಬೆಳೆಯುತ್ತ ಹೋದ ವ್ಯಾಸರು ಆವತ್ತೊಮ್ಮೆ ಫೋನ್ ಮಾಡಿ “ನನ್ನ ಗೆಳೆಯರು, ನನಗಿಂತಲೂ ಸಣ್ಣವರೆಲ್ಲ ಒಬ್ಬೊಬ್ಬರೇ ಹೋಗುತ್ತಾ ಇದ್ದಾರೆ. ನಮ್ಮದೆಲ್ಲ ಆಗ್ತಾ ಬಂತು" ಎಂದಿದ್ದರು. “ಹಾಗೆಲ್ಲ ಹೇಳ್ಬೇಡಿ. ನಿಮಗಿಂತ ಮೊದಲೇ ನಾವು ಹೋದರೂ ಹೋಗ್ಬಹುದು" ಎಂದು ಚೇಷ್ಟೆ ಮಾಡಿ ಫೋನಿಟ್ಟಿದ್ದೆ. ನೀಗಿಕೊಳ್ಳುವುದಕ್ಕೆ ಎರಡು ದಿನ ಮುನ್ನ ಫೋನ್ ಮಾಡಿದ್ದರು. “ಚಿಕುನ್ ಗುನ್ಯಾ ಆಗಿದೆ ಮಾರಾಯ್ರೆ. ಗಂಟು ಗಂಟು ಬೇನೆ. ಎದ್ದು ನಡಿಲಿಕ್ಕೆ ಕೂಡುದಿಲ್ಲ" ಎಂದಿದ್ದರು. ಅದಾಗಿ ಎರಡು ದಿನಗಳಲ್ಲಿ ಸುದ್ದಿ ಬಂತು.

“ಮುನ್ನೂರಕ್ಕೂ ಹೆಚ್ಚು ಕತೆ ಬರೆದ ನಿಮಗೆ ವಿಮರ್ಶೆಯೂ ಸಿಗಲಿಲ್ಲವಲ್ಲಾ ಮಾರಾಯರೇ" ಎಂದು ಯಾರಾದರೂ ಹೇಳಿದರೆ ಒಂದು ಪೇಲವ ನಗೆ ಬಿಟ್ಟು ಬೇರೆ ಉತ್ತರ ಕೊಡದ ವ್ಯಾಸ ; ಯಾವ ಸಾಹಿತ್ಯ ಸಮ್ಮೇಳನದಲ್ಲೂ ಸಂವಾದಗಳಲ್ಲೂ ಭಾಗವಹಿಸದ ವ್ಯಾಸ ; ಸನ್ಮಾನ ಮಾಡುತ್ತೇನೆಂದು ಕರೆದರೆ ಬಾಂಬ್ ಕಂಡವರಂತೆ ಭಯಪಟ್ಟು ನಾಪತ್ತೆಯಾಗುವ ವ್ಯಾಸ ; ಚಿಕ್ಕಂದಿನಲ್ಲೇ ತಂದೆಯ ಕಗ್ಗೊಲೆಯಾದುದನ್ನು ಕಣ್ಣಾರೆ ಕಂಡು ಆ ನೆತ್ತರ ಕಲೆಗಳನ್ನು ಜೀವಮಾನದುದ್ದಕ್ಕೂ ಹೊತ್ತು ತಿರುಗಿದ ವ್ಯಾಸ ; ನನ್ನಂಥ ಚಿಕ್ಕವರನ್ನು ತಲೆ ಮೇಲೆ ಹೊತ್ತು ಮೆರೆಸಿದ ವ್ಯಾಸ ; ದುರ್ಗಾಪುರದಲ್ಲೂ ಶಂಕರೀನದಿಯಲ್ಲೂ ಇಡೀ ಜಗತ್ತಿನ ಮನುಷ್ಯರ ಆಳದಾಳದ ಹೊಯ್ಲುಗಳನ್ನು ಕಂಡ ವ್ಯಾಸ.

ನಾನು ಹೀಗೆಲ್ಲ ಬರೆದಿದ್ದೇನೆಂದು ಗೊತ್ತಾದರೆ ಅವರು ಖಂಡಿತ ನನ್ನ ಕನಸಿನಲ್ಲಿ ಬಂದು “ಇದೆಲ್ಲ ಎಂತದಕ್ಕೆ ಮಾರಾಯರೇ. ನೆಟ್ಟಗೆ ಒಂದು ಕತೆ ಬರಿಯಿರಿ ನೋಡುವ" ಎಂದು ತಾಕೀತು ಮಾಡಿ ಸುಮ್ಮನೆ ನಗುತ್ತಾ ಕೂರಲಿಕ್ಕುಂಟು.