Tuesday, December 7, 2010

ಇಬ್ಬನಿ ತಬ್ಬಿದ ಇಳೆ



‘ಹೋಗಿ ಸಾರ್, ಈ ಸೀಸನ್ನಿನಲ್ಲಿ ಐನೂರ್ರೂಪಾಯಿಗಿಂತ ಕಡಿಮೆಗೆ ಇಷ್ಟೊಳ್ಳೆ ಜರ್ಕಿನ್ ಕೊಡೋಕಾಗಲ್ಲ...’ ಅಂತ ಕಡ್ಡಿ ಮುರಿದಂತೆ ಹೇಳುತ್ತಿದ್ದಾನೆ ಅಂಗಡಿಯವನು. ಮೆಜೆಸ್ಟಿಕ್‌ನ ಆಚೆಗಿರುವ ಅಂಗಡಿಗಳಾಗಲೇ ಬಾಗಿಲ ಶಟರ್ ಎಳೆಯುತ್ತಿವೆ. ಊರಿನಿಂದ ಮಿಗಿಸಿ ತಂದಿರುವ ಎರಡು ಸಾವಿರ ರೂಪಾಯಿಯಲ್ಲಿ ಐನೂರು ಜರ್ಕಿನ್‌ಗೇ ಸುರಿದರೆ ಮುಂದಿನ ಊಟಕ್ಕೇನು ಮಾಡುವುದು ಎಂಬ ಚಿಂತೆ ಆ ತರುಣನನ್ನು ಕೊರೆಯಹತ್ತಿದೆ. ಜಿಪ್ ಹರಿದ ಬ್ಯಾಗನ್ನು ಅವುಚಿಕೊಂಡು ಆತ ರಸ್ತೆಯ ಅಂಚಿನಲ್ಲಿ ಬಂದು ವಿಷಾದದಿಂದ ನೋಡುತ್ತ ನಿಂತಿದ್ದಾನೆ. ಕುಟುಕುಟು ಚಳಿಯ ಗಾಳಿಯೊಂದು ಆ ರಾತ್ರಿಯ ಮುನ್ನುಡಿಯಾಗಿ ಬಂದು ಆತನನ್ನು ನಿಷ್ಕರುಣೆಯಿಂದ ತಾಗಿದೆ.

‘ಈಗ ಒಂದ್ರೂಪಾಯಿ ಎರಡ್ರೂಪಾಯಿಗೆಲ್ಲ ಕಡ್ಲೆಕಾಯ್ ಕೊಡೋಕಾಗಲ್ಲ ರ್ರೀ... ಮೂರ್ರೂಪಾಯ್ ಮಿನಿಮಮ್...’ ಎಂದು ಒರಟಾಗಿ ನುಡಿದು ಮಾಸಿದ ಅಂಗಿಯ ಗಿರಾಕಿಯನ್ನು ಅಕ್ಕಪಕ್ಕದವರು ಲೇವಡಿಯಿಂದ ನೋಡುವಂತೆ ಮಾಡಿದ ಕಡ್ಲೇಕಾಯ್ ಮಾರುವವನು, ಉಬ್ಬಿದ ಹೊಟ್ಟೆಯ ಬೀಟ್ ಪೊಲೀಸ್ ಹತ್ತಿರಕ್ಕೆ ಬರುತ್ತಲೇ ಥಂಡಿ ಹತ್ತಿದ ಕುನ್ನಿಯಂತಾಗಿಬಿಟ್ಟಿದ್ದಾನೆ. ಆ ಪೊಲೀಸ್ ದೊಡ್ಡ ಪ್ಯಾಕೆಟ್ ತುಂಬಾ ಬಿಟ್ಟಿ ಕಡ್ಲೇಕಾಯ್ ಒಯ್ಯುತ್ತಿರುವಾಗ ಈತ ಮನಸ್ಸಿನಲ್ಲೇ ಶಾಪ ಹಾಕುತ್ತ ನಿರ್ವಿಣ್ಣನಾಗಿ ನೋಡುತ್ತಿದ್ದಾನೆ.

ಅವೆನ್ಯೂ ರೋಡಿನ ಇಕ್ಕಟ್ಟು ಕ್ರಾಸುಗಳಲ್ಲಿ, ಕಸದ ರಾಶಿಗೆ ಬೆಂಕಿ ಹಚ್ಚಿ ರಾತ್ರಿ ಪಾಳಿಯ ಪೊಲೀಸರು ಕೂತಿದ್ದಾರೆ. ಈಗಷ್ಟೆ ತಟ್ಟಾಡುತ್ತ ಹಾದು ಹೋದ ರಿಯಲ್ ಎಸ್ಟೇಟ್ ಏಜೆಂಟ್ ಕುಬೇರನ ಫಾರ್ಚುನರ್ ಕಾರನ್ನು ಡ್ರಂಕನ್ ಡ್ರೈವಿಂಗ್ ಕೇಸಿನಡಿ ಹಿಡಿದು ಹಾಕಬಹುದೋ ಬಾರದೋ ಎಂಬ ಅನುಮಾನ ಅವರಿಗಿನ್ನೂ ಶಮನವಾಗಿಲ್ಲ. ಎಂಜಿ ರೋಡಿನ ಪಕ್ಕದಲ್ಲಿ ಟೈಟ್ ಜೀನ್ಸ್ ಧರಿಸಿ ನಿಂತಿರುವ ಹುಡುಗಿಯ ಪಕ್ಕದಲ್ಲಿ ಬಂದ ಕಾರುಗಳೆಲ್ಲ ಯಾಕಿಷ್ಟು ಸ್ಲೋ ಆಗುತ್ತಿವೆ ! ಕಬ್ಬನ್ ಪಾರ್ಕಿನ ಮೂಲೆಯ ಪೊದೆಗಳು ಆಗಾಗ ಸುಮ್ಮನೆ ಅಲುಗಾಡುತ್ತವೆ !

ಇಲ್ಲಿ ಕೋಳಿಗಳು ಕೂಗುವುದಿಲ್ಲ. ಆದರೆ ಚಾಯ್ ಮಾರುವವರು ಆಗಲೇ ಲಾಂಗ್ ಟ್ರಿಪ್ ಬಸ್‌ಗಳಿಂದ ಇಳಿಯುತ್ತಿರುವವರ ಮುಂದೆ ಪ್ರತ್ಯಕ್ಷರಾಗಿ ‘ಬಿಸ್ಸಿಬಿಸಿ ಕಾಫಿ ಚಾಯ್...’ ಎಂದು ಕೂಗು ಹಾಕತೊಡಗಿದ್ದಾರೆ. ಬೆಳಗ್ಗೆ ಆರು ಗಂಟೆಗೆಲ್ಲ ಜೀವ ಪಡೆಯುತ್ತಿದ್ದ ಪೇಟೆಯ ಬೀದಿಗಳು, ಎಂಟಾದರೂ ಇನ್ನೂ ಯಾಕೋ ಮೌನದಲ್ಲಿ ಅದ್ದಿ ತೆಗೆದಂತಿವೆ. ಅಲ್ಲೊಂದು ಇಲ್ಲೊಂದು ಬೂಟುಗಾಲಿನ ಸಪ್ಪಳ. ಮೂಲೆಮನೆಯ ಮಹಾನುಭಾವ ವಾಕಿಂಗ್ ಶೂಗಳನ್ನು ಬಿಗಿದು ವರಾಂಡದ ಕುರ್ಚಿಯಲ್ಲಿ ರಗ್ಗು ಹೊದ್ದು ಕೂತವನು, ಹಾಗೇ ನಿದ್ದೆ ಹೋಗಿದ್ದಾನೆ. ತರಗೆಲೆಗಳನ್ನು ಪರಾಪರಾ ಗುಡಿಸುತ್ತಿರುವ ಪೌರ ಕಾರ್ಮಿಕ ಹೆಂಗಸು, ಈ ಚಳಿಯಲ್ಲಿ ಕೆಲಸಕ್ಕೆ ಹಚ್ಚಿದ ಯಾರಿಗೋ ಬಯ್ಯುತ್ತ ಗೊಣಗುಟ್ಟುತ್ತಿರುವುದು ಇಲ್ಲಿಗೇ ಕೇಳುತ್ತಿದೆ. ಮುಂಜಾನೆ ಯಾರೋ ಚಳಿ ಕಾಯಿಸಲು ಹಚ್ಚಿದ ಕಸದ ರಾಶಿಯ ಬೆಂಕಿಯ ಬೂದಿಗುಪ್ಪೆಗಳನ್ನು ನೋಡುತ್ತ ಕೆಎಸ್‌ನ ಕವನದ ಸಾಲುಗಳು ನೆನಪಾಗುತ್ತಿವೆ: ‘ಸಂಜೆಗೊಬ್ಬಳು ಮುದುಕಿ, ಕೊನೆಯ ಕೆಂಡವ ಕೆದಕಿ, ಎತ್ತಿ ಮುಡಿದಳು ತನ್ನ ಗಂಟು ಜಡೆಗೆ...’

*
ಮಲೆನಾಡಿನ ಚಳಿಯ ದಿನಗಳೇ ಬೇರೆ ರೀತಿ. ಅದೊಂದು ರೀತಿ ಮೌನದ ಸುದೀರ್ಘ ಮೆರವಣಿಗೆ. ಸಂಜೆ ಐದಾಗುವ ಮುನ್ನವೇ ಎಲ್ಲ ಜೀವಗಳೂ ಬೆಚ್ಚಗಿನ ಸೂರಿನ ಒಳಗೆ ಮುದುಡುತ್ತವೆ. ಉದ್ದನೆಯ ರಾತ್ರಿಗೆ, ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ ಸಂಡಿಗೆಗಳು ಸಾಥ್ ಕೊಡುತ್ತವೆ. ಹೊರಗೆ ಮಂಜು ಸುರಿಯುತ್ತಲೇ ಇರುತ್ತದೆ. ಮುಂಜಾನೆಯ ಕಿರಣಗಳನ್ನು ಮುದುಕ ಮುದುಕಿಯರು ಜೋರಾಗಿ ಕೆಮ್ಮುತ್ತ ಸ್ವಾಗತಿಸುತ್ತಾರೆ. ಸಂಜೆ ಮುಂಜಾನೆ ಆಟದ ಮೈದಾನಗಳು ಖಾಲಿ ಹೊಡೆಯುತ್ತವೆ. ಅಡಕೆಯ ಸೋಗೆಗಳಿಂದ ತಟಪಟನೆ ಬೀಳುತ್ತಿರುವ ಮುಂಜಾನೆಯ ಇಬ್ಬನಿಗಳು ಒದ್ದೆ ಮಾಡಿದ ನೆಲ ಒಣಗಬೇಕಾದರೆ ಮಧ್ಯಾಹ್ನ. ಈ ಹಗಲುಗಳು ಎಷ್ಟೊಂದು ಚಿಕ್ಕವೆಂದರೆ, ಒದ್ದೆ ನೆಲ ಒಣಗುವ ಮುನ್ನವೇ ಅದು ಮತ್ತೆ ತಂಪಾಗುವ ಸಂಜೆಯೂ ಆಗಮಿಸಿಬಿಡುತ್ತದೆ. ಹಾಲು ತುಂಬಿದ ಭತ್ತದ ತೆನೆಗಳು ನಿಧಾನವಾಗಿ ಜೇನು ಬಣ್ಣಕ್ಕೆ ತಿರುಗುತ್ತ, ಸಂಜೆಯ ಗಾಳಿಗೆ ಸುಯ್ಯನೆ ಶಬ್ದ ಮಾಡುತ್ತ ಸಮುದ್ರದ ಅಲೆಗಳಂತೆ ಹೊಯ್ದಾಡಿ, ಅದುವರೆಗೆ ಬೆವರು ಹರಿಸಿದ ರೈತನಿಗೆ ನಿಟ್ಟುಸಿರಿನ ಫೀಲಿಂಗ್ ನೀಡುತ್ತವೆ.

ಚಳಿಗಾಲದ ರಾತ್ರಿಗಳು ಎಷ್ಟೊಂದು ದೀರ್ಘವೆಂದು, ಹೊದೆಯಲು ರಗ್ಗಿಲ್ಲದ ಬಡವರಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟೊಂದು ಸುಖಕರವೆಂದು ನವದಂಪತಿಗಳನ್ನು ಕೇಳಬೇಕು. ಈ ರಾತ್ರಿಗಳು ಎಷ್ಟು ರಗಳೆಯದೆಂದು ರಾತ್ರಿ ಪಾಳಿಯವರಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟು ಯಾತನಾದಾಯಕವೆಂದು ಜೈಲುವಾಸಿಗಳಲ್ಲಿ ಕೇಳಬೇಕು. ಈ ರಾತ್ರಿಗಳು ಎಷ್ಟು ಶ್ರಮದಾಯಕವೆಂದು ಲಾಂಗ್‌ಜರ್ನಿ ಬಸ್ ಚಾಲಕರಲ್ಲಿ, ರಾತ್ರಿರಾಣಿಯರಲ್ಲಿ ಕೇಳಬೇಕು.

*
‘ಈ ಚಳಿಯ ಇರುಳು ಎಷ್ಟೊಂದು ದೀರ್ಘ
ಇದ ಕಳೆಯಲು ನಿನ್ನ ಅಪ್ಪುಗೆಯೊಂದೆ ಮಾರ್ಗ’
ಅಂತ ಹೇಳುತ್ತಾನೆ ಉರ್ದು ಕವಿಯೊಬ್ಬ. ಚಳಿ ಕಳೆಯಲು ಅವರವರಿಗೆ ಅವರವರದೇ ಮಾರ್ಗಗಳಿವೆಯೇನೋ ! ಬೇಸಿಗೆ ಬಿಸಿಲಿನಿಂದ ಪಾರಾಗಲು ಮದಿರೆ, ತಣ್ಣೆಳಲು, ಮಾನಿನಿಯ ನಳಿದೋಳ್ಗಳ ಉಪಾಯ ಹೇಳಿದ ಉಮರ್ ಖಯ್ಯಾಮ್, ಚಳಿ ದಾಟಲು ಯಾವ ಉಪಾಯವನ್ನೂ ಹೇಳಿದಂತಿಲ್ಲ. ತಣ್ಣೆಳಲು ಒಂದು ಬಿಟ್ಟರೆ, ಆತನೆಂದ ಉಳಿದ ಉಪಾಯಗಳು ಚಳಿಗೂ ಅನ್ವಯ ಆಗುತ್ತವೆ ಅಂದುಕೊಳ್ಳೋಣವೆ ! ಅಥವಾ ಸರ್ವಜ್ಞನ ಮಾತು: ‘ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು, ಇಚ್ಛೆಯನರಿವ ಸತಿಯಿರಲು...’ ಇದು ಜೋಡಿ ಇದ್ದವರ ಮಾತಾಯಿತು. ಅವಿವಾಹಿತರು, ಸಂಗಾತಿ ಕಳೆದುಕೊಂಡವರು, ಒಂಟಿ ಜೀವಗಳು ಚಳಿಗಾಲ ಕಳೆಯಲು ಏನು ಮಾಡಬೇಕು ?

*
ನೀವು ಕೃಷಿ ಸಂಸ್ಕೃತಿಗೂ ಜೀವನಕ್ರಮಕ್ಕೂ ಸೇರಿದವರಾಗಿದ್ದರೆ, ನೀವು ನಿಮಗೇ ಸೇರಿದವರೆಂಬ ಸಂದೇಶವನ್ನು ಚಳಿಗಾಲ ಮುಟ್ಟಿಸುತ್ತದೆ. ಅದು ಬೇಸಿಗೆಯಂತೆ ಉರಿಯುವುದಿಲ್ಲ, ಬೆವರು ಹರಿಸಿ ಬಟ್ಟೆ ಕಿತ್ತೆಸೆದು, ಸಿಟ್ಟಿನಿಂದ ಅನ್ಯರ ಜತೆ ಕೂಗಾಡಿ ಗೋಳು ಹುಯ್ದುಕೊಳ್ಳುವಂತೆ ಮಾಡುವುದಿಲ್ಲ. ಮಳೆಗಾಲದಂತೆ ರಾಚಿ ರಾಡಿ ಎಬ್ಬಿಸುವುದಿಲ್ಲ. ಚಳಿಗಾಲದಲ್ಲಿ ನೀವು ಅಮ್ಮ ಹೊಲಿದು ಕೊಟ್ಟ ಕೌದಿ ಹೊದ್ದು ಒಲೆಯ ಮುಂದೆ ಕುಳಿತು ನಿಮ್ಮೊಳಗೇ ನಿಮ್ಮನ್ನು ನೋಡಿಕೊಳ್ಳಬಹುದು. ‘ಮರದ ಕೊಂಬೆಗಳು ಉದುರಿಸಿವೆ ಎಲೆಗಳ/ಸ್ವಾಗತಿಸಲು ಉಣ್ಣೆಯ ಸ್ವೆಟರ್‌ಗಳ...’ ಎಂಬಂತಹ ಕಾವ್ಯಾತ್ಮಕ ಸಾಲುಗಳನ್ನು ಸವಿಯಬಹುದು. ಲಾರಾ ಇಂಗೆಲ್ಸ್ ವೈಲ್ಡರ್‌ಳ ‘ಚಳಿಯ ಸುಳಿಯಲ್ಲಿ’, ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರ’ ಮುಂತಾದ ಕೃತಿಗಳನ್ನು ಓದಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಸರಿದುಹೋದ ಜೀವನದ ಘಟನೆಗಳನ್ನು ಮೆಲುಕು ಹಾಕಿ ಅಚ್ಚರಿಯನ್ನೋ ಖುಷಿಯನ್ನೋ ವಿಷಾದವನ್ನೋ ಪಡುತ್ತಿರಬಹುದು.

‘ಆನ್ ಅಫೇರ್ ಟು ರಿಮೆಂಬರ್’ ಚಲನಚಿತ್ರದಲ್ಲಿ ಒಂದು ಡಯಲಾಗ್ ಬರುತ್ತೆ: ‘ಬೆಚ್ಚಗಿನ ನೆನಪುಗಳು ಇಲ್ಲದವರಿಗೆ ಚಳಿಗಾಲ ಮತ್ತಷ್ಟು ಶೀತಲವಾಗಿರುತ್ತೆ...’ ಎಷ್ಟು ನಿಜ ಅಲ್ಲವೆ ?
*

Sunday, December 5, 2010

ತೊಟ್ಟಿಲಲ್ಲಿ ಪುಟ್ಟ ದೇವತೆ


ಮೊನ್ನೆ, ಡಿಸೆಂಬರ್ ೨ ಮುಂಜಾನೆ ನಮ್ಮ ಮನೆಗೊಂದು ಪುಟ್ಟ ಅತಿಥಿಯ ಆಗಮನವಾಯ್ತು. ಇದು ಆಕೆಯ ಚಿತ್ರ.

Monday, October 4, 2010

ಚರಕ ಕ್ರಾಂತಿ




‘ಏನು ದರಿದ್ರ ಊರು ರೀ ಇದು, ಬಂದ್ರೆ ಅತ್ತಿತ್ತ ಹೋಗೋಕಾಗಲ್ಲ, ಸ್ನೇಹಿತರನ್ನು ಮಾತಾಡ್ಸೋಕಾಗೊಲ್ಲ. ಬಂದು ಆರು ದಿನವಾಯ್ತು. ಯಾವಾಗ ವಾಪಸ್ಸು ಹೆಗ್ಗೋಡಿಗೆ ಹೋಗ್ತೀನೋ ಅನ್ನಿಸ್ತಿದೆ...’ ಅಂತ ಗೊಣಗಿದರು ಪ್ರಸನ್ನ. ಪೂರ್ಣಚಂದ್ರ ತೇಜಸ್ವಿಯವರೂ ಹೀಗೆಯೇ ಹೇಳುತ್ತಿದ್ದರು ಅಂತ ನೆನಪಾಯಿತು.

ಸರಳ ಜುಬ್ಬಾ- ಪೈಜಾಮ ಧರಿಸುವ ಪ್ರಸನ್ನ ಹಳ್ಳಿಗೆ ಮರಳಲು ಚಡಪಡಿಸುವುದು, ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ದೇಸಿ ಸಂಸ್ಥೆಯ ಶುದ್ಧ ಹತ್ತಿ ಕೈಮಗ್ಗದ ಸೀರೆಯಂಗಡಿ ಗಾಂ ಜಯಂತಿಯಂದೇ ಉದ್ಘಾಟನೆಯಾಗುವುದು, ಅದನ್ನು ರಾಜೇಶ್ವರಿ ತೇಜಸ್ವಿ ಅವರು ಉದ್ಘಾಟಿಸುವುದು, ನೇಕಾರಿಕೆ ಸಂಸ್ಥೆಯ ಹೆಸರು ‘ಚರಕ’ ಎಂದೇ ಇರುವುದು... ಇವೆಲ್ಲ ಕಾಕತಾಳೀಯ ಇರಲಾರದು.

ಅ.೨ರಂದು ಶ್ರೀನಿವಾಸ ನಗರದಲ್ಲಿ ಉದ್ಘಾಟನೆಯಾದದ್ದು ದೇಸಿಯ ಎಂಟನೇ ಮಳಿಗೆ. ಈಗಾಗಲೇ ಹೆಗ್ಗೋಡು, ಸಾಗರ, ಶಿವಮೊಗ್ಗ, ದಾವಣಗೆರೆಗಳಲ್ಲಿ ಒಂದೊಂದಿವೆ. ಮೈಸೂರಿನಲ್ಲಿ ಇಷ್ಟರಲ್ಲೇ ಒಂದು ತೆರೆಯಲಿದೆ. ಬೆಂಗಳೂರಿನಂತಹ ಬೆಂಗಳೂರಿನಲ್ಲಿದು ನಾಲ್ಕನೇ ಅಂಗಡಿ. ಜನರೆಲ್ಲ ರೆಡಿಮೇಡ್ ಹಾಗೂ ವಿದೇಶಿ ಉಡುಪುಗಳಿಗೆ ಮೊರೆ ಹೋಗುತ್ತಿರುವಾಗ, ಸ್ಥಳೀಯವಾಗಿ ತಯಾರಾಗುವ ದಿರಸುಗಳಿಗೆ ಈ ಪಾಟಿ ಬೇಡಿಕೆ ಬರುತ್ತಿದೆ ಅಂದರೆ ಅದು ನಿಜಕ್ಕೂ ಒಳ್ಳೆಯ ನ್ಯೂಸೇ. ಖಾದಿ ಹಾಗೂ ಕೈಮಗ್ಗದ ಬಟ್ಟೆಗಳಿಗೆ ಇಂದಿಗೂ ಒಂದು ವಲಯದಲ್ಲಿರುವ ಬೇಡಿಕೆ, ಯುವಜನರಲ್ಲಿ ದೇಸಿ ಉಡುಪುಗಳ ಬಗ್ಗೆ ಹೆಚ್ಚುತ್ತಿರುವ ಪ್ರೀತಿಗೆ ಇದು ದ್ಯೋತಕ ಅನ್ನಬಹುದಾ ? ಐಟಿ ಬಿಟಿ ಹುಡುಗರೂ ದೇಸಿ ಉಡುಪು ಹುಡುಕಿಕೊಂಡು ಬಂದು ಧರಿಸುವಂತಹ ಟ್ರೆಂಡ್ ಕ್ರಿಯೇಟ್ ಮಾಡಿದ ಅಗ್ಗಳಿಕೆ ಮಾತ್ರ ಪ್ರಸನ್ನರಿಗೇ ಸಲ್ಲುತ್ತದೆ.

ಈ ಅಂಗಡಿಗೆ ಕಾಲಿಟ್ಟರೆ ನೀವೊಂದು ಆರ್ಟ್ ಗ್ಯಾಲರಿಗೆ ಹೊಕ್ಕ ಅನುಭವ ಪಡೆಯುತ್ತೀರಿ. ‘ನೇಕಾರ್ತಿ ನಗುವಂತೆ ಮಾಡಿ’ ‘೫೦೦೦ ವರ್ಷಗಳ ಪರಂಪರೆಯಿದು’ ಎನ್ನುವ ಭಿತ್ತಿಪತ್ರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೆಗ್ಗೋಡಿನ ಹೆಣ್ಣುಮಕ್ಕಳು ಕೈಯಾರೆ ನೇಯ್ದ ಸ್ಥಳೀಯ ಸೊಗಡು ಸೂಸುವ ಡಿಸೈನ್ ಕಾಟನ್ ಸೀರೆಗಳ ಜತೆ ಒರಿಸ್ಸಾದ ಇಕ್ಕತ್ ಸೀರೆ, ಬಂಗಾಲದ ತಾಂಗಾಯ್, ಆಂಧ್ರದ ಚಿರಾಲ, ಭಾಗಲ್ಪುರದ ಟಸ್ಸರ್ ಸಿಲ್ಕ್, ಕರ್ನಾಟಕದ ಇಳಕಲ್ ಸೀರೆಗಳೆಲ್ಲ ನಿಮಗಿಲ್ಲಿ ಸಿಗಬಹುದು.

ಇಲ್ಲಿ ಮೂರಡಿ ಎತ್ತರದವರೆಗಷ್ಟೇ ಬಟ್ಟೆಯ ರ್‍ಯಾಕುಗಳಿವೆ. ಅದರಿಂದ ಮೇಲೆ ? ‘ಅಲ್ಲಿ ಬೇರೆ ಬೇರೆ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುತ್ತೇವೆ. ಆ ಮೂಲಕ ಇದು ಕಲೆಯನ್ನೂ- ಕುಶಲ ಕಲೆಯನ್ನೂ ಬೆಸೆಯುವ ಯತ್ನ’ ಅನ್ನುತ್ತಾರೆ ಪ್ರಸನ್ನ. ‘ಒಂದು ಡಬ್ಬಿ ಇಡ್ತೀವಿ. ಐದುನೂರು ರೂಪಾಯಿ ಸೀರೆ ಖರೀದಿಸಬೇಕೆಂದು ಬಂದವರು ೪೫೦ ರೂಪಾಯಿಯ ಸೀರೆ ಖರೀದಿಸಿದರೆ, ಉಳಿದ ಹಣವನ್ನು ಅದರಲ್ಲಿ ಹಾಕಿ ಹೋಗಬಹುದು. ಹಾಗೆ ಸಂಗ್ರಹವಾದ ಹಣವನ್ನು ಬಯಲುಸೀಮೆಯ ಬಡ ಕುಟುಂಬಗಳಿಗೆ ಕಂಬಳಿ ನೀಡಲು ವಿನಿಯೋಗಿಸುತ್ತೇವೆ. ಹೀಗೆ ವಸ್ತ್ರದಾನ ಮಾಡಿದ ಪುಣ್ಯವೂ ನಿಮ್ಮದಾಗುತ್ತದೆ...’ ಎಂದು ನಗುತ್ತಾರೆ ಪ್ರಸನ್ನ.

ಎಲ್ಲಿಯ ಪ್ರಸನ್ನ, ಎಲ್ಲಿಯ ಹೆಗ್ಗೋಡು, ಎಲ್ಲಿಯ ಚರಕ. ಇದೆಲ್ಲವನ್ನೂ ಬೆಸೆದ ಕೊಂಡಿಗಳು ಹಲವಾರು... ರಂಗಭೂಮಿ, ಸಮಾಜವಾದ, ಗಾಂ ಚಿಂತನೆ, ಪರಿಸರ ಕಾಳಜಿ, ಅಧ್ಯಾತ್ಮ... ಹೀಗೆ ಅದು ಪರಿಕಲ್ಪನೆಗಳ ಕಲಸುಮೇಲೋಗರ. ಅಥವಾ ಇವೆಲ್ಲವನ್ನೂ ಮೇಳೈಸಿದ ‘ಪ್ರಸನ್ನ ಚಿಂತನೆ’ ಅಂದರೂ ಸೈ. ಎಂಬತ್ತರ ದಶಕದ ಸುಮಾರಿಗೇ ಪ್ರತಿಭಾವಂತ ನಿರ್ದೇಶಕರೆಂದು ಹೆಸರು ಮಾಡಿದ್ದ ಪ್ರಸನ್ನ, ನೀನಾಸಂ ಸಂಸ್ಥೆಯ ರಂಗಭೂಮಿ ಚಟುವಟಿಕೆಗಳ ಜತೆಗೆ ಸಕ್ರಿಯರಾಗಿದ್ದರು. ಅದೇ ಹೊತ್ತಿಗೆ ಮಲೆನಾಡಿನಲ್ಲಿ ಕೃಷಿಗಾಗಿ ನಡೆದಿದ್ದ ನಿರಂತರ ಕಾಡಿನ ಸವೆತ ಅವರ ಮನ ಕೊರೆಯುತ್ತಿತ್ತು. ಇದಕ್ಕೊಂದು ಪರಿಹಾರ ಸಾಧ್ಯವಿಲ್ಲವೆ ಎಂಬ ಹಪಹಪಿ. ಹಾಗೆ ೧೯೯೬ರಲ್ಲಿ, ಭೀಮನಕೋಣೆಯ ಗುಡ್ಡವೊಂದರ ಮೇಲೆ ಪಾಳುಬಿದ್ದ ಸರಕಾರಿ ಷೆಡ್‌ನಲ್ಲಿ, ಒಂದೆರಡು ಹೊಲಿಗೆ ಯಂತ್ರಗಳೊಂದಿಗೆ ‘ಚರಕ’ ಆರಂಭವಾಯ್ತು.

ಪ್ರಸನ್ನರ ಪ್ರಕಾರ, ಮಲೆನಾಡಿನ ತುಂಗಾ ನದಿಯ ತೀರ, ನೈಸರ್ಗಿಕ ಬಣ್ಣಗಾರಿಕೆಗೆ ಹೇಳಿ ಮಾಡಿಸಿದ ಪ್ರದೇಶ. ಇಲ್ಲಿ ದೊರೆಯುವ ಸಿಹಿ ನೀರು ಬಣ್ಣಗಾರಿಕೆಗೆ ವರ.
ಅಡಕೆ ಚೊಗರು, ಅಳಲೆಕಾಯಿ, ದಾಳಿಂಬೆ ಸಿಪ್ಪೆ, ಇಂಡಿಗೋ ನೀಲಿ, ರಂಗಮಾಲೆ ಬೀಜ, ಅಂಟುವಾಳ, ಶೀಗೆ ಮುಂತಾದ ಸ್ಥಳೀಯ ಕಾಡುತ್ಪತ್ತಿಗಳೇ ಇಲ್ಲಿ ಬಣ್ಣಗಾರಿಕೆಗೆ ಕಚ್ಚಾ ಮಾಲುಗಳು. ಇದರಿಂದ ರಾಸಾಯನಿಕಗಳು ಕುಡಿಯುವ ನೀರಿಗಾಗಲೀ, ಅಂತರ್ಜಲಕ್ಕಾಗಲೀ ಸೇರುವ ಪ್ರಶ್ನೆಯಿಲ್ಲ. ನೇಕಾರರ ಆರೋಗ್ಯ ಕೆಡುವ ಪ್ರಸಕ್ತಿಯಿಲ್ಲ. ಒಟ್ಟಿನಲ್ಲಿ ಇದು ಎಕಾಲಾಜಿಕಲ್ ಇಂಡಸ್ಟ್ರಿ- ಪರಿಸರಸ್ನೇಹಿ ಉದ್ಯಮ. ೨೦ ರೂಪಾಯಿಯ ಬಟ್ಟೆಗೆ ಆಮದು ಬಣ್ಣಗಳನ್ನು ತರಿಸಿಕೊಂಡು ಹಚ್ಚಿ ಮಾರುವುದಾದರೆ ೬೦ ರೂ. ಬೀಳುತ್ತದೆ. ಅದೇ ಬಟ್ಟೆಗೆ ನೈಸರ್ಗಿಕ ಬಣ್ಣಗಳನ್ನು ಹಚ್ಚಿದರೆ ಇನ್ನೂ ಕಡಿಮೆ ಬೆಲೆಗೆ ಮಾರಿ, ನೇಕಾರರಿಗೆ ಲಾಭಾಂಶವನ್ನೂ ನೀಡಬಹುದು ಎಂಬುದು ಪ್ರಸನ್ನರ ಲೆಕ್ಕಾಚಾರ.

ಚರಕ, ದೇಸಿ, ಇಂದು ಇಷ್ಟು ಬೆಳೆದಿದ್ದರೂ, ತಾನು ಬಂಡವಾಳಶಾಹಿಯಾಗದಿರಲು ನಿರ್ಧರಿಸಿದೆ. ದೇಸಿಯಲ್ಲಿ ಮಾರಾಟವಾಗದೆ ಉಳಿಯುವ ಮಾಲು ಇಲ್ಲ. ಇಲ್ಲಿನ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಹಾಗೆಂದು ಚರಕ ವಿಸ್ತರಣಾಕಾಂಕ್ಷಿಯಲ್ಲ. ಪ್ರತಿಯೊಂದು ಊರೂ ತನ್ನದೇ ಆದ ಇಂತಹ ಘಟಕವನ್ನು ರೂಪಿಸಿ ಬೆಳೆಸಬೇಕು, ಅಲ್ಲಿನವರಿಗೇ ಉದ್ಯೋಗ ದೊರೆಯಬೇಕು ಎಂಬುದು ಪ್ರಸನ್ನರ ಚಿಂತನೆ. ಇಂದು ಹೆಗ್ಗೋಡಿನ ಚರಕದಲ್ಲಿ ಹತ್ತಿರತ್ತಿರ ೪೦೦ ಮಹಿಳೆಯರು ದುಡಿಯುತ್ತಿದ್ದಾರೆ. ಎಲ್ಲರೂ ಬಡ, ಮಧ್ಯಮ ವರ್ಗದ ಮಹಿಳೆಯರೇ. ಹಾಗೆಂದು ಊರಿನ ಕೃಷಿ ಚಟುವಟಿಕೆ ಬರ್ಬಾದ್ ಆಗಿಲ್ಲ. ಯಾಕೆಂದರೆ ಸುತ್ತಮುತ್ತಲಿನ ಊರುಗಳವರೂ ಇಲ್ಲಿ ದುಡಿಯುತ್ತಾರೆ. ಅದು ಬರೀ ಕೆಲಸವಲ್ಲ, ಸಂತೃಪ್ತಿ ನೀಡುವ ಕಲೆಗಾರಿಕೆ. ಇಲ್ಲಿ ವಿದ್ಯುತ್‌ಚಾಲಿತ ಯಂತ್ರಗಳಿಲ್ಲ. ಮಳೆನೀರು ಸಂಗ್ರಹ, ಮಣ್ಣಿನ ಗೋಡೆ, ಹಂಚಿನ ಕಟ್ಟಡಗಳಿವೆ. ಕೊಳವೆ ಬಾವಿ ಬದಲು ತೆರೆದ ಬಾವಿಯಿದೆ. ಇಂಗುಗುಂಡಿಗಳಿವೆ.

ಒಟ್ಟಾರೆ ಚರಕ- ದೇಸಿಯ ಬಗ್ಗೆ ಪ್ರಸನ್ನರ ದರ್ಶನ ಅಥವಾ ಕಾಣ್ಕೆ ಏನು ?
‘ಕೈಮಗ್ಗ ಉದ್ಯಮ ರೋಗಿಷ್ಟ, ಅದರಿಂದ ಪ್ರಯೋಜನವಿಲ್ಲ ಎಂಬ ಭಾವನೆ ಹಬ್ಬಿಸಲಾಗುತ್ತಿದೆ. ಅದು ಸುಳ್ಳು. ನಮ್ಮ ಚರಕವನ್ನೇ ತೆಗೆದುಕೊಳ್ಳಿ. ಈಗ ಇದರ ವಾರ್ಷಿಕ ವಹಿವಾಟು ೯ ಕೋಟಿ. ಇಲ್ಲಿ ಅಪಾರ ಸಾಧ್ಯತೆಗಳಿವೆ. ಹಳ್ಳಿಯ ಬಡ ನೇಕಾರರು ತಯಾರಿಸಿದ ಬಟ್ಟೆಯನ್ನು ನಗರದ ಜನ ಕೊಳ್ಳುತ್ತಾರೆ. ಹಳ್ಳಿ- ಪೇಟೆ ಪರಸ್ಪರ ಶತ್ರುಗಳು ನಿಜ. ಆದರೆ ಹಳ್ಳಿಯ ಜನ- ಪೇಟೆಯ ಜನ ಶತ್ರುಗಳಲ್ಲ. ಅವರು ತಮ್ಮ ಕೌಶಲಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಚರಕಕ್ಕೆ ಇದುವರೆಗೂ ನಯಾಪೈಸೆ ಫಾರಿನ್ ಹಣ ತೆಗೆದುಕೊಂಡಿಲ್ಲ. ಸರಕಾರದ ನೆರವನ್ನು ಹತ್ತು ಶೇಕಡಕ್ಕಿಂತ ಹೆಚ್ಚಿಗೆ ಬಳಸಿಕೊಂಡಿಲ್ಲ. ಯಾಕೆಂದರೆ ಅದಕ್ಕಿಂತ ಹೆಚ್ಚಾದರೆ ಯಾವುದೇ ಇಂಡಸ್ಟ್ರಿಯೂ ನೆಲ ಕಚ್ಚುತ್ತದೆ. ಚರಕದಲ್ಲಿ ದುಡಿಯುವ ಬಡ, ಅನಕ್ಷರಸ್ಥ ಹೆಣ್ಣುಮಗಳೂ ಇಂದು ಸ್ವಂತ ಸಂಪಾದನೆಯನ್ನು ಮನೆಗೆ ಒಯ್ಯುತ್ತಾಳೆ. ಅಲ್ಲಿನ ಕಂಪ್ಯೂಟರನ್ನೂ ಅವರೇ ನಿಭಾಯಿಸುತ್ತಾರೆ...’

ಒಂದು ಕಾಲದಲ್ಲಿ ಪ್ರಸನ್ನ ಚಳುವಳಿಗಳಲ್ಲಿ ಓಡಾಡಿದವರು. ಅದಕ್ಕೆಲ್ಲ ಈಗ ಫುಲ್‌ಸ್ಟಾಪಾ ? ‘ಜನಪರ ಅಂತ ಹೇಳಿಕೊಳ್ಳುವ ಮಂದಿಯನ್ನು ನೋಡಿ ಸಾಕಾಗಿದೆ. ಜನಪರ ಅಲ್ಲ, ಜನರ ಜತೆಗೆ ನಾವಿರಬೇಕು. ಲೇಖಕರು, ಕಲಾವಿದರಿಗೆ ಜನರ ಜತೆಗೆ ಸಾವಯವ ಸಂಬಂಧವಿರಬೇಕು. ಕುಶಲಕಲೆಗಳ ಮೂಲಕ ಅದು ಸಾಧ್ಯ. ಮೊದಲು ಸರಿಯಾದ ಬದುಕು ಕಟ್ಟಿಕೊಳ್ಳೋಣ. ಮತ್ತೆಲ್ಲ ಮತ್ತೆ.’

‘ರಂಗಭೂಮಿಯನ್ನು ಸಂಪೂರ್ಣ ಬಿಟ್ಟಿಲ್ಲ. ಚರಕದ ಕೆಲಸಗಳೇ ಸಾಕಷ್ಟಿರುವುದರಿಂದ ರಂಗಭೂಮಿ ಹೆಚ್ಚು ಹಚ್ಚಿಕೊಳ್ಳುವುದಕ್ಕಾಗುತ್ತಿಲ್ಲ. ಅಲ್ಲೂ ಪ್ರತಿವರ್ಷ ಚರಕ ಉತ್ಸವ ಮಾಡಿ, ಸಾಂಸ್ಕೃತಿಕ ವಾತಾವರಣ ರೂಪಿಸುತ್ತಿದ್ದೇವೆ. ನಾನು ಬರೆದ ‘ಕೊಂದವರಾರು’ ನಾಟಕ ಕಳೆದ ವರ್ಷ ಬಿಡುಗಡೆಯಾಯ್ತು, ಒಂದು ವರ್ಷದಲ್ಲಿ ಎಂಟು ಪ್ರಿಂಟ್ ಕಂಡಿತು. ಅಂದ್ರೆ ಮಕ್ಕಳ ರಂಗಭೂಮಿಯಲ್ಲಿ ಅಪಾರ ಸಾಧ್ಯತೆ ಇದೆ ಅಂತ ಅರ್ಥ. ಮಕ್ಕಳಿಗಾಗಿ ನಾವು ಕೆಲಸ ಮಾಡಬೇಕು.’

‘ನಟನೆಯ ಬಗ್ಗೆ ಪುಸ್ತಕಗಳು ಬೇಕಾದ್ರೆ ನಾವು ಸ್ಟಾನಿಸ್ಲಾವ್‌ಸ್ಕಿ ಮುಂತಾದ ವಿದೇಶೀಯರ ಮೊರೆ ಹೋಗುತ್ತೇವೆ. ನಮ್ಮದೇ ಅನಿಸುವ ಕೃತಿಗಳಿಲ್ಲ. ಈ ಕೊರತೆ ತುಂಬಲು ‘ಭಾರತೀಯ ರಂಗಭೂಮಿಯಲ್ಲಿ ನಟನೆ’ಯ ಬಗ್ಗೆ ಇಂಗ್ಲಿಷ್‌ನಲ್ಲಿ ಒಂದು ಪುಸ್ತಕ ಬರೀತಿದೇನೆ.’

Thursday, April 15, 2010

ಒಂದು ಒಳ್ಳೆ ಕಾರ್ಟೂನು



ಮಿತ್ರ ದಿನೇಶ್ ಕುಕ್ಕುಜಡ್ಕ ತುಂಬ ಒಳ್ಳೆಯ ವ್ಯಂಗ್ಯಚಿತ್ರವೊಂದನ್ನು ಬರೆದು ಕಳುಹಿಸಿದ್ದಾನೆ. ಇದಕ್ಕೆ
‘ಗಡಿ ದಾಟಿದ ಪ್ರೀತಿಯ ಕುಡಿ,
ಅದನ್ನೂ ಬಿಡದ ದ್ವೇಷದ ಕಿಡಿ’

ಎಂದೆಲ್ಲ ಹೆಡ್ಡಿಂಗ್ ಕೊಟ್ಟು ನಿಮ್ಮ ತಲೆ ತಿನ್ನಲು ಮನಸ್ಸಾಗುತ್ತಿದೆ. ಅದೆಲ್ಲ ಬೇಡ, ಚಿತ್ರ ಚೆನ್ನಾಗಿದೆ. ನಿಮ್ಮ ಅವಗಾಹನೆಗೆ:

Friday, April 9, 2010

ತಂಪಾಗೋಣ ಬನ್ನಿ







ನನ್ನ ಆತ್ಮೀಯ ಮಿತ್ರ, ಹಿರಿಯ ಸಹೋದ್ಯೋಗಿ ರಾಧಾಕೃಷ್ಣ ಭಡ್ತಿ ಅವರ ಐದು ಪುಸ್ತಕಗಳು ಭಾನುವಾರ ಬಿಡುಗಡೆಯಾಗುತ್ತಿವೆ. ನೀರಿನ ಕುರಿತು ಐದಾರು ವರ್ಷಗಳಿಂದ ಬರೆಯುತ್ತ ಬಂದ ಅಂಕಣ ಬರಹಗಳಿವು. ಅವರು ಬಹುಶಃ ನೀರಿನ ಕುರಿತು ಯೋಚಿಸಿದಷ್ಟು ಬೀರಿನ ಕುರಿತು ಯೋಚಿಸಿರಲಿಕ್ಕಿಲ್ಲ. ಈ ಸುಡು ಬೇಸಿಗೆಯಲ್ಲಿ ನೀರಿನ ಬಗ್ಗೆ ಮಾತನಾಡುವುದು, ಕೇಳುವುದು ತಂಪು ತಂಪು.
ಹಾಗೇ ಗೆಳೆಯ ಅಪಾರ ರಚಿಸಿದ ಸೊಗಸಾದ ಮುಖಪುಟಗಳನ್ನು ನೋಡುವುದು ಕೂಡ.
ಗಾಯನ ಸಮಾಜದ ಎದುರಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಬೆಳಗ್ಗೆ ೧೧ ಗಂಟೆಗೆ ಸಮಾರಂಭ. ನೀರೆಚ್ಚರದ ಪುಸ್ತಕಗಳು, ನೀರು, ಹಸಿರು ಪತ್ರಕರ್ತರಾದ ಶ್ರೀಪಡ್ರೆ, ನಾಗೇಶ್ ಹೆಗಡೆ ಮುಂತಾದವರ ಉಪಸ್ಥಿತಿ. ಎಲ್ಲ ನೀರುಮಯ.
ವಿ.ಸೂ.: ಬೆಳಗ್ಗೆ ತಿಂಡಿಯಿದೆ. ಆದ್ರೆ ನೀರು ದೋಸೆ, ವಾಟರ್ ಮೆಲನ್ ಜ್ಯೂಸ್ ಸಿಗುತ್ತದೆ ಅಂದ್ಕೋಬೇಡಿ ಮತ್ತೆ !

Wednesday, February 3, 2010

ಹಿಂತಿರುಗಿ ನೋಡಿದರೆ ಯಾರೂ ಇರಲಿಲ್ಲ...



ಭಾನುವಾರ ನಾಗೇಶ್ ಹೆಗಡೆ ಅವರ ಆರು ಪುಸ್ತಕಗಳ ಬಿಡುಗಡೆಯಾಯ್ತು. ಅಂದು ಕೆ.ವಿ.ಅಕ್ಷರ ಮಾತನಾಡಿದ್ದನ್ನು, ಅದು ತುಂಬ ಮುಖ್ಯ ಅನಿಸಿದ್ದರಿಂದ, ನನಗೆ ನಾನೇ ಇನ್ನಷ್ಟು ಮನನ ಮಾಡಿಕೊಳ್ಳುವುದಕ್ಕಾಗಿ ಸಂಗ್ರಹಿಸಿ ಇಲ್ಲಿ ದಾಖಲಿಸಿದ್ದೇನೆ.

*
ನಾಗೇಶ್ ಹೆಗಡೆ ಕನ್ನಡದ ಮುಖ್ಯ ಪತ್ರಕರ್ತರಲ್ಲೊಬ್ಬರು. ಆಕ್ಟಿವಿಸಂ ಗುಣ ಹೊಂದಿದ್ದ ಕನ್ನಡದ ಶ್ರೇಷ್ಠ ಪತ್ರಕರ್ತರು ಕೂಡ. ರಾಜ್ಯದ, ದೇಶದ ಸದ್ಯದ ತುರ್ತನ್ನು ಗ್ರಹಿಸಿಕೊಂಡು ಅವರು ಬರೀತಾರೆ ಮಾತ್ರವಲ್ಲ, ಅಗತ್ಯ ಬಿದ್ದರೆ ಕಣಕ್ಕೆ ಇಳೀತಾರೆ ಕೂಡ. ಅವರಿಗೆ ಹೋಲಿಸಬಹುದಾದರೆ, ನಮ್ಮ ದೇಶದಲ್ಲಿ ಕಾಣಿಸೋ ಇನ್ನೊಬ್ಬ ಪತ್ರಕರ್ತ ಅಂದ್ರೆ ಪಿ.ಸಾಯಿನಾಥ್ ಮಾತ್ರ.

ಪರಿಸರದ ಬಗ್ಗೆ ಹೆಗಡೆಯವರ ಬದ್ಧತೆ ಪ್ರಶ್ನಾತೀತವಾದದ್ದು. ಒಂದು ಸನ್ನಿವೇಶ ನೆನಪಾಗ್ತಿದೆ. ಶಿವರಾಮ ಕಾರಂತರು ಉತ್ತರ ಕನ್ನಡದಿಂದ ಚುನಾವಣೆಗೆ ನಿಂತಿದ್ದರು. ನಿಂತ ಮೇಲೆ ತಮ್ಮ ಪಾಡಿಗೆ ಅಮೆರಿಕಕ್ಕೆ ಹೋಗಿದ್ದರು. ಆದರೆ ನಮಗೊಂದು ಇತ್ತಲ್ಲ, ಶಿವರಾಮ ಕಾರಂತರು ಸೋಲಬಾರದು ಅಂತ. ಹೀಗಾಗಿ ಪ್ರಚಾರಕ್ಕೆ ಮುಂದಾಗಿದ್ವಿ. ನಾಗೇಶ ಹೆಗಡೆಯವರು ಒಂದು ಪುಟ್ಟ ರೂಮು ಬಾಡಿಗೆಗೆ ಹಿಡಿದು ಕುರ್ಚಿ ಹಾಕಿಕೊಂಡು ಕುಳಿತಿದ್ದರು. ಅವರೇ ಶಿವರಾಮ ಕಾರಂತರ ಚೀಫ್ ಎಲೆಕ್ಷನ್ ಆಫೀಸರ್ ! ಆ ಹಳ್ಳಿ, ಈ ಹಳ್ಳಿ ಅಂತ ನಮ್ಮನ್ನು ಪ್ರಚಾರ ಭಾಷಣಕ್ಕೆ ಕಳಿಸ್ತಿದ್ದರು.

ಭಾಷಣ ಕೇಳಿಸಿಕೊಳ್ಲಿಕ್ಕೆ ಎರಡು ಜನ ಸಹ ಬರ್ತಿರಲಿಲ್ಲ. ಹಳ್ಳಿ ಜನರಿಗೆ ಕಾರಂತರ ಹೆಸರು ಕೇಳಿ ಸಹ ಗೊತ್ತಿರಲಿಲ್ಲ. ಒಂದು ಹಳ್ಳೀಲಿ ಹೋಟೆಲ್ ಇಟ್ಟಿದ್ದ ಇನ್ನೊಬ್ಬ ಕಾರಂತರಿದ್ದರು. ಜನ ಅವರನ್ನು ಇವರೆಂದು ಕನ್‌ಫ್ಯೂಸ್ ಮಾಡಿಕೊಂಡು ‘ಆ ಕಾರಂತ್ರಿಗೆ ವೋಟ್ ಹಾಕಿದ್ರೆ ನಮಗೇನು ತಿಂಡಿ ಪುಗಸಟ್ಟೆ ಕೊಡ್ತಾರಾ ?’ ಎಂದು ಕೇಳಿದ್ದುಂಟು. ಕಾರಂತರು ಸೋಲೋದು ನಮಗೆ ಆಗ್ಲೇ ಖಚಿತವಾಗಿತ್ತು.
ಒಮ್ಮೆ ನಾಗೇಶ್ ಹೆಗಡೆ ನಮ್ಮಲ್ಲಿಗೆ ಉಪನ್ಯಾಸ ನೀಡೋದಕ್ಕೆ ಬಂದಿದ್ರು. ಪರಿಸರ, ಬೃಹತ್ ಯೋಜನೆಗಳ ಬಗ್ಗೆ ಮಾತಾಡಿದರು. ಆಗ ಅವರು ಹೇಳಿದ ಮಾತು ನಂಗೆ ಈಗ್ಲೂ ಜ್ಞಾಪಕದಲ್ಲಿದೆ. “ಕೈಗಾ ಮುಂತಾದ ಬೃಹತ್, ಪರಿಸರ ಹಾನಿಕಾರಕ ಯೋಜನೆಗಳು ಉತ್ತರ ಕನ್ನಡಕ್ಕೆ ಬಂದಾಗ ನಾವೆಲ್ಲ ಅದನ್ನು ವಿರೋಸಿ ಹೋರಾಟ ಆರಂಭಿಸಿದೆವು. ಪ್ರತಿಭಟನೆ ಶುರು ಹಚ್ಚಿಕೊಂಡೆವು. ಆರಂಭದಲ್ಲಿ ಪ್ರತಿಭಟನೆಗೆ ಒಳ್ಳೆಯ ಬೆಂಬಲವೂ ವ್ಯಕ್ತವಾಯ್ತು. ಹಾಗೇ ಮುಂದುವರಿದೆವು. ಹೋಗ್ತಾ ಹೋಗ್ತಾ ಒಂದು ಹಂತದಲ್ಲಿ ನಿಂತು ಹಿಂದೆ ತಿರುಗಿ ನೋಡ್ತೇವೆ- ನಮ್ಮ ಹಿಂದಿದ್ದೋರೆಲ್ಲ ಇಟ್ಟಿಗೆ ಹೊತ್ತುಕೊಂಡು ಅಯೋಧ್ಯೆಯ ಕಡೆಗೆ ಹೋಗಿದ್ದರು..."

ನಾಗೇಶ್ ಹೆಗಡೆ ಅವರ ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಬೃಹತ್ ಯೋಜನೆಗಳು ಬರ್ತಿದ್ದವು. ಅದಕ್ಕೆ ಹೋರಾಟಗಳು ಹುಟ್ಟಿಕೊಳ್ಳುತ್ತಿದ್ದವು. ಹೆಗಡೆಯವರು ಅದರ ಧ್ವನಿಯಾಗಿ ಕೆಲಸ ಮಾಡಿದರು. ಆದ್ರೆ ‘ಪೋಸ್ಟ್ ನಾಗೇಶ್ ಹೆಗಡೆ’ ಕಾಲದಲ್ಲಿ ಏನಾಗ್ತಿದೆ ಅನ್ನೋದನ್ನೂ ನೋಡಬೇಕು.

ಸದ್ಯ ನಮ್ಮ ದೇಶದ ಕೃಷಿ ಕ್ಷೇತ್ರಕ್ಕೆ ಒದಗಿರುವ ಗಂಡಾಂತರವನ್ನು ಯಾರೂ ಸರಿಯಾಗಿ ಗ್ರಹಿಸಿದಂತಿಲ್ಲ. ಬಿಟಿ ಬದನೆ ಬರ್ತಿದೆ, ಬಿಟಿ ಹತ್ತಿ ಬೆಳೆದವರು ಆತ್ಮಹತ್ಯೆ ಮಾಡಿಕೊಂಡಿದಾರೆ, ಯಾವ ಬೆಳೆಗೂ ಸರಿಯಾದ ಬೆಲೆಯಿಲ್ಲ- ಇವೆಲ್ಲ ಇಶ್ಯೂಗಳಾಗಿವೆ ನಿಜ. ಆದರೆ ಕೃಷಿ ಎಂಬ ಒಂದು ಜೀವನ ವಿಧಾನವೇ ಇಲ್ಲವಾಗುತ್ತಿರೋದನ್ನು ಯಾರೂ ಮನಗಂಡ ಹಾಗಿಲ್ಲ.

ಇಲ್ಲಿಂದ ನೂರಾರು ಮೈಲು ದೂರದ ಒಂದು ಮಲೆನಾಡಿನ ಹಳ್ಳಿಯಲ್ಲಿ ಅಡಿಕೆ ಕೃಷಿ ಮಾಡಿಕೊಂಡು ಬದುಕುತ್ತಾ ಇರುವ ನನಗೆ ಇದು ಗೊತ್ತಾಗ್ತಿದೆ. ಮಲೆನಾಡಿನ ಅಡಿಕೆ ಕೃಷಿಕರಿಗೆ ಈಗಾಗಲೇ ತಮ್ಮ ಜಾಗ ಮಾರಿ ಪೇಟೆಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಒಂದು ಎಕ್ರೆ, ಎರಡೆಕ್ರೆ ಇರುವ ಸಣ್ಣ ಹಿಡುವಳಿದಾರರು ಇನ್ನು ಹತ್ತು ವರ್ಷಗಳಲ್ಲಿ ಹೇಳ ಹೆಸರಿಲ್ಲದಂತಾಗುತ್ತಾರೆ. ಆಮೇಲೇನಿದ್ದರೂ ನೂರಾರು ಎಕರೆ ಹೊಂದಿದ ಜಮೀನ್ದಾರರು, ಕಂಪೆನಿಗಳು ದೊಡ್ಡ ಪ್ರಮಾಣದ ಕೃಷಿ ಮಾಡಿ ಬದುಕಿಕೊಳ್ಳಬಹುದಷ್ಟೇ.

ನನ್ನ ಊರಿನಿಂದ ನಾನು ಬೆಂಗಳೂರಿಗೆ ಬರಬೇಕಾದರೆ ಪೀಣ್ಯ, ದಾಸರಹಳ್ಳೀಲಿ ನಡೀತಿರೋ ಅಗಾಧವಾದ ಮೆಟ್ರೋ, ರಸ್ತೆ, ಬಿಲ್ಡಿಂಗ್ ಕೆಲಸಗಳು ಇವನ್ನೆಲ್ಲ ದಾಟಿಕೊಂಡು ಬರಬೇಕು. ಅಲ್ಲಿ ನಡೀತಿರೋ ಕೆಲಸ, ಆ ದೈತ್ಯಾಕಾರದ ಯಂತ್ರಗಳು, ವಾಹನ ಪ್ರಮಾಣ ಇವನ್ನೆಲ್ಲ ನೋಡ್ತಾ ನೋಡ್ತಾ ನನಗೆ ವಿಚಿತ್ರವಾದ ಹಗಲುಕನಸುಗಳು ಬೀಳಲು ಶುರುವಾಗ್ತವೆ. ಇವೆಲ್ಲ ಏನು ? ಇವೆಲ್ಲ ಯಾವತ್ತಾದರೂ ಮುಗಿಯೋ ಕೆಲಸಗಳಾ ? ಇವು ಮಗಿದಾಗ ಮತ್ತೂ ಎಷ್ಟು ಲಕ್ಷ ವಾಹನಗಳು ರಸ್ತೆಗಿಳೀತವೋ ? ಆಗ ಮತ್ತೆ ಇವೆಲ್ಲ ಮೊದ್ಲಿಂದ...

ನೀವು ಪ್ರಯಾಣ ಹೊರಟು ನೋಡಿ, ಪ್ರತಿ ಹತ್ತು ಕಿಲೋಮೀಟರ್‌ಗೆ ಒಂದು ಕಡೆ ರಸ್ತೆ ರಿಪೇರಿ ನಡೀತಿರೋದು ಕಾಣಿಸ್ತದೆ. ಯಾವತ್ತೂ ಮುಗಿಯದ ರಿಪೇರಿ ಅದು. ಅಗೆದಲ್ಲೇ ಮತ್ತೆ ಮತ್ತೆ ಅಗೀತಾರೆ, ಮುಚ್ತಾರೆ. ಅಂದರೆ, ಇದು ಸರಕಾರಿ ಪ್ರಾಯೋಜಿತ ಬೀದಿ ನಾಟಕ ಅಷ್ಟೆ. ಜನರಿಗೆ ತೋರಿಸಬೇಕು- ಅಭಿವೃದ್ಧಿ ಆಗ್ತಿದೆ ಅಂತ. ಆದ್ರೆ ನಿಜವಾಗಿ ಆಗಿರಬಾರದು. ಹಾಗಾಗಿ ಇದು ಅಭಿವೃದ್ಧಿಯ ಬೀದಿ ನಾಟಕ.

ಇದನ್ನೆಲ್ಲ ಅರ್ಥ ಮಾಡಿಕೊಂಡು ಬರೆಯೋರು ನಿಜವಾಗಿ ನಾಗೇಶ್ ಹೆಗಡೆ ಅವರ ಉತ್ತರಾಕಾರಿಗಳಾಗ್ತಾರೆ.