Friday, January 30, 2009

ಖಯ್ಯಾಮನ ದುರಂತ

‘ಹೆಂಡ, ಹೆಣ್ಣು , ತಣ್ಣೆಳಲು, ರೊಟ್ಟಿಯ ತುಂಡು- ನನಗಿಷ್ಟು ಸಾಕು’ ಎಂದ ಕವಿ, ದಾರ್ಶನಿಕ ಉಮರ್ ಖಯ್ಯಾಮ್ ಇದೀಗ ಪಡಖಾನೆಯಲ್ಲಿ ಮಧು ಹೀರಿ ಉನ್ಮತ್ತ. ಜೀವೋತ್ಸಾಹ ತುಂಬಿದ ಒಂದಿಷ್ಟು ಹುಡುಗ- ಹುಡುಗಿಯರ ನರ್ತನ ಅವನ ಸುತ್ತ.

ಯಾರೋ ಎಚ್ಚರಿಸಿದರು : ‘ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ. ಈ ತರುಣಿಯರು, ಅವರ ಕುಡಿತ, ಜತೆಗೆ ನೀನು ! ಅವರು ಒಂದಿಷ್ಟೂ ಸಹಿಸುವುದಿಲ್ಲ !’

ಖಯ್ಯಾಮ್ ಕಡೆಗಣ್ಣಿನಿಂದ ನೋಡಿ ಕುಡಿತ ಮುಂದುವರಿಸಿದ.

ಕೊಂಚ ಹೊತ್ತಿನಲ್ಲೇ ಹೊರಗೆ ಗದ್ದಲ ಜೋರು ಜೋರಾಗತೊಡಗಿತು. ಜತೆಗಿದ್ದ ತರುಣರು ಓಡುತ್ತಾ ಕೂಗಿದರು- ‘ಖಯ್ಯಾಮ್, ಓಡಿ ಜೀವ ಉಳಿಸಿಕೋ. ಅವರು ಬಂದೇ ಬಿಟ್ಟರು. ಇಲ್ಲೇ ಇದ್ದರೆ ದುರಂತ ಖಂಡಿತ’

ಖಯ್ಯಾಮ್ ಕಡೆಗಣ್ಣು ತೆರೆದು ಹೇಳಿದ : "ಮೂರ್ಖರೇ ! ದುರಂತ ಎಂದೋ ಆರಂಭವಾಗಿದೆ. ಚಲಿಸುತ್ತಿದೆ. ಅದು ಶುರುವಾದಾಗ ನೀವೆಲ್ಲ ನಿದ್ರಿಸುತ್ತಿದ್ದಿರಿ ! ಈಗ ಅದನ್ನು ನೀವಾದರೂ ಹೇಗೆ ತಡೆಯಬಲ್ಲಿರಿ ?!"

ಅಷ್ಟು ಹೇಳಿ ಮತ್ತೆ ಮತ್ತೊಂದು ಬಾಟಲಿ ಬಿರಡೆ ಬಿಚ್ಚಿದ.