Thursday, August 6, 2009

ಅಡಿಗ ಮತ್ತು ಇಂಗ್ಲಿಷ್ ಸಾಹಿತ್ಯ


“ಮಂಗಳೂರು, ಭಾರತದ ಕರಾವಳಿಯ ಪಟ್ಟಣ. ಅಲ್ಲಿ ನಾನು ಸುಮಾರು ೧೬ ವರ್ಷ ವಯಸ್ಸಾಗುವವರೆಗೆ ಇದ್ದೆ. ಈಗ ಅದು ಮಾಲ್‌ಗಳು, ಕಾಲ್‌ಸೆಂಟರ್‌ಗಳಿಂದ ತುಂಬಿರುವ ಬೆಳೆದ ನಗರವಾಗಿದೆ. ೧೯೮೦ರ ದಶಕದಲ್ಲಿ ಅದು ಸಮಾಜವಾದಿ ದೇಶವೊಂದರ ದೇಸೀ ಮಾದರಿಯ ಪೇಟೆಯಾಗಿತ್ತು. ಪುಸ್ತಕಗಳು ಅಂದು ದುಬಾರಿಯೆನಿಸಿದ್ದವು. ಕೊಂಡುಕೊಳ್ಳುವವರು ಕಡಿಮೆ ಇದ್ದರು. ನಾವು ಸರ್ಕ್ಯುಲೇಟಿಂಗ್ ಲೈಬ್ರರಿಗಳಿಗೆ ಸೇರಿ ಪುಸ್ತಕ ತಂದು ಓದುತ್ತಿದ್ದೆವು- ಹದಿನೈದು ದಿನಕ್ಕೊಂದು ಕಾದಂಬರಿಗೆ ಎರಡು ರೂಪಾಯಿ, ಕಾಮಿಕ್ಸ್‌ಗೆ ೫೦ ಪೈಸೆ ಬಾಡಿಗೆ."

“ದೇಶಭಕ್ತಿಯ ಚರ್ಚೆಗಳು ನನ್ನ ತಲೆಮಾರಿಗಾಗಲೇ ಅಪ್ರಸ್ತುತವಾಗಿದ್ದವು. ನನ್ನ ಅಜ್ಜಂದಿರು ಹೇಳುತ್ತಿದ್ದ ‘ಕಿಂಗ್ಸ್ ಇಂಗ್ಲಿಷ್’ ನಮ್ಮ ಮಟ್ಟಿಗೆ ‘ನೆಹರೂ ಇಂಗ್ಲಿಷ್’ ಆಗಿತ್ತು. ೧೯೪೭ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಪ್ರಧಾನಿ ಮಾಡಿದ ಭಾಷಣದ ‘ವಿಯ ಜತೆ ಒಪ್ಪಂದ’, ಗಾಂಜಿ ಅವರ ಹತ್ಯೆಯಾದಾಗ ಅವರು ನುಡಿದ ‘ನಮ್ಮ ಜೀವನಗಳಿಂದ ಬೆಳಕು ಹೊರಟುಹೋಗಿದೆ’- ಇತ್ಯಾದಿಗಳು ಅಲ್ಲಲ್ಲಿ, ನಮ್ಮ ಪಠ್ಯಪುಸ್ತಕಗಳಲ್ಲಿ, ರೇಡಿಯೋಗಳಲ್ಲಿ, ಪತ್ರಿಕೆಗಳಲ್ಲಿ ತುಣುಕು ತುಣುಕಾಗಿ ಕಣ್ಣಿಗೆ ಬೀಳುತ್ತಿದ್ದವು."

“ದಕ್ಷಿಣ ಭಾರತೀಯ ಭಾಷೆಯಾದ ಕನ್ನಡ, ಭಾರತೀಯ ಪದಗಳಲ್ಲಿ ಹೇಳುವುದಾದರೆ ನನ್ನ ‘ಮಾತೃಭಾಷೆ’ (ಅಂದರೆ ಸಾಮಾನ್ಯವಾಗಿ ತಂದೆ ಮಾತನಾಡುತ್ತಿದ್ದ ಭಾಷೆ), ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಸೃಜಿಸಿದೆ. ಆದರೆ ಅದರ ಕವಿಗಳು ಹಾಗೂ ಸಾಹಿತಿಗಳಲ್ಲಿ ನನ್ನನ್ನು ಪ್ರಭಾವಿಸಿದವರು ಒಬ್ಬರು ಮಾತ್ರ- ಯು.ಆರ್.ಅನಂತಮೂರ್ತಿ (ಭಾರತದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು). ಅದೂ ಕೂಡ ಅವರ ಒಂದು ಕಾದಂಬರಿ ಸಿನೆಮಾ ಆಗಿದೆ ಎಬ ಕಾರಣದಿಂದ. ನನ್ನ ಹೈಸ್ಕೂಲ್ ಸಹಪಾಠಿಗಳಲ್ಲಿ ತರಗತಿಯಿಂದ ಆಚೆಗೆ ಕನ್ನಡ ಪುಸ್ತಕ ಓದುತ್ತಿದ್ದವರು ಅಪರೂಪ. ಅಲ್ಲಿ ನಮಗೆ ಒತ್ತಾಯದಿಂದ ಪದ್ಯ ಹಾಗೂ ಗದ್ಯದ ತುಣುಕುಗಳನ್ನು ಜೀವವೇ ಇಲ್ಲದ ನೀರಸ ರೀತಿಯಲ್ಲಿ, ೮೦ರ ದಶಕದ ಟಿಪಿಕಲ್ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಕಲಿಸಲಾಗುತ್ತಿತ್ತು. ನಮ್ಮನ್ನು ಸೆಳೆಯುತ್ತಿದ್ದ ಆಕರ್ಷಕ ಬರಹಗಳೆಲ್ಲ ಇಂಗ್ಲಿಷ್‌ನಲ್ಲಿದ್ದವು."

‘ಬಿಳಿ ಹುಲಿ’ಗೆ ಬೂಕರ್ ಪ್ರಶಸ್ತಿ ಪಡೆದ ಅರವಿಂದ್ ಅಡಿಗ ಈ ಬಾರಿ ‘ಬಿಟ್ವೀನ್ ದಿ ಅಸಾಸಿನೇಶನ್ಸ್’ ಎನ್ನುತ್ತ ಪ್ರತ್ಯಕ್ಷರಾಗಿದ್ದಾರೆ. ಇದು ೧೯೮೪ರಲ್ಲಿ ನಡೆದ ಇಂದಿರಾ ಗಾಂ ಹತ್ಯೆ ಹಾಗೂ ೧೯೯೧ರಲ್ಲಿ ನಡೆದ ರಾಜೀವ್ ಗಾಂ ಕಗ್ಗೊಲೆಗಳ ನಡುವಿನ ಕಾಲದಲ್ಲಿ ‘ಕಿತ್ತೂರು’ ಎಂಬ ಕಾಲ್ಪನಿಕ ಪಟ್ಟಣದಲ್ಲಿ ನಡೆಯುವ ಕತೆಗಳ ಸಂಕಲನ.

ಮಂಗಳೂರಿನ ಪರಿಸರ-ಬಾಲ್ಯ- ಸಾಹಿತ್ಯ ಪ್ರೇರಣೆ ಇತ್ಯಾದಿಗಳ ಬಗ್ಗೆ ಅವರು ಬರೆದುಕೊಂಡ ‘ಇಂಗ್ಲಿಷ್ ಸಾಹಿತ್ಯ ನನ್ನನ್ನು ಹೇಗೆ ರೂಪಿಸಿತು ?’ ಎಂಬ ಲೇಖನದಿಂದ ಆಯ್ದ ಭಾಗಗಳಿವು. ಇಡೀ ಲೇಖನ ಓದಬೇಕಾದರೆ ಇಲ್ಲಿದೆ : http://www.independent.co.uk/arts-entertainment/books/features/aravind-adiga-how-english-literature-shaped-me-1749429.html

Saturday, August 1, 2009

ಆ ಬರಹ ಮಾರ್ಕ್ವೆಜ್‌ನದಲ್ಲ !


ಮೊದಲ ಬಾರಿಗೆ, ನನ್ನ ಬರಹದ ಬಗ್ಗೆ ನನಗೇ ನಾಚಿಕೆಯಾಗುವಂಥ ಪರಿಸ್ಥಿತಿ ಬಂದಿದೆ. ಹೇಗೆ ಪಿಗ್ಗಿ ಬಿದ್ದೆ ಎಂಬುದನ್ನು ನೆನೆಸಿಕೊಂಡರೆ ಈಗ ನಗುವೂ ಬರುತ್ತಿದೆ.

ಕಳೆದ ಬಾರಿ ‘ಮಾರ್ಕ್ವೆಜ್ ಗುಡ್‌ಬೈ ಹೇಳುತ್ತಿದ್ದಾನೆ’ ಲೇಖನ ಪೋಸ್ಟ್ ಮಾಡಿದ್ದೆನಲ್ಲ. ಆ ಲೇಖನ ಮಾರ್ಕ್ವೆಜ್‌ನದಲ್ಲವೇ ಅಲ್ಲ ! ಅದು ‘ಜಾನ್ ವೆಲ್ಷ್’ ಎಂಬ ಹೆಸರಿನ ಎರಡನೇ ದರ್ಜೆಯ ಕವಿ ಬರೆದು ಮಾರ್ಕ್ವೆಜ್ ಹೆಸರಿನಲ್ಲಿ ತೇಲಿಬಿಟ್ಟದ್ದು. ಮೇಲ್ ಕಳಿಸಿದ ಮಿತ್ರರೇ ಇದನ್ನೂ ನನಗೆ ತಿಳಿಸಿದರು, ಆದರೆ ಗೊತ್ತಾಗುವಷ್ಟರಲ್ಲಿ ಅನಾಹುತ ಆಗಿಬಿಟ್ಟಿತ್ತು.

೨೦೦೦ನೇ ಇಸವಿಯಲ್ಲಿ ಪೆರುವಿನ ‘ಲಾ ರಿಪಬ್ಲಿಕಾ’ ಎಂಬ ಹೆಸರಿನ ಪತ್ರಿಕೆಯಲ್ಲಿ ಈ ಕವನ ಮೊದಲ ಬಾರಿ ಮಾರ್ಕ್ವೆಜ್ ಹೆಸರಿನಲ್ಲಿ ಪ್ರಕಟವಾಯಿತು. ಬಹಳ ಜನ ಇದನ್ನು ನಂಬಿಯೂಬಿಟ್ಟರು. ಹಾಗೇ ಅದು ಅಲ್ಲಿಂದ ಅಂತರ್ಜಾಲಕ್ಕೆ ಬಂತು. ಮೇಲ್‌ಗಳು ಹರಿದಾಡತೊಡಗಿದವು. ಹೇಗೂ ಮಾರ್ಕ್ವೆಜ್ ಅಸ್ವಸ್ಥ ಎಂಬ ಸುದ್ದಿ ನಿಜವೇ ಇತ್ತಲ್ಲ , ಇದೂ ನಿಜವೇ ಇರಬಹುದೆಂದುಕೊಂಡರು ಜನ.

ಇದು ಮಾರ್ಕ್ವೆಜ್ ಗಮನಕ್ಕೆ ಬಂದಾಗ ಆತ ನೊಂದುಕೊಂಡ. ಮೇಲ್ ಅನ್ನು ನೋಡಿ- “ಬರಿ ಸೆಂಟಿಮೆಂಟಲ್ ಕ್ರಾಪ್ ! ಇಂಥದ್ದನ್ನು ನಾನು ಬರೆದೇನು ಎಂದು ನೀವು ನಂಬುವಿರಾದರೂ ಹೇಗೆ !" ಎಂದನಂತೆ ಆತ !

ಇಂಟರ್‌ನೆಟ್ ಇಂಥ ಮಿಥ್‌ಗಳನ್ನು ಹರಡುವ ಕೇಂದ್ರವಾಗಿದೆ ಎಂಬುದು ಕೂಡ ನಮ್ಮ ಎಚ್ಚರಕ್ಕೆ ಹೊಸ ಕಾರಣವನ್ನು ಈಗ ಸೇರಿಸಿದೆ. ನನ್ನ ದುಡುಕಿಗೆ ಸಾಕ್ಷಿಯಾಗಿ ಈ ಬರಹ ಇರಲಿ ಎಂದು ಬ್ಲಾಗ್‌ನಲ್ಲಿ ಅಳಿಸದೇ ಹಾಗೇ ಬಿಟ್ಟಿದ್ದೇನೆ.

ಈ ಕವನದ ಹಿನ್ನೆಲೆ ಮುನ್ನೆಲೆಗಳ ಬಗ್ಗೆ ಇನ್ನಷ್ಟು ತಿಳಿಯಬೇಕಾದರೆ ಈ ಲಿಂಕ್ ನೋಡಿ: http://www.vahidnab.com/marquez.pdf