Sunday, July 26, 2009

ಮಾರ್ಕ್ವೆಜ್ ಗುಡ್‌ಬೈ ಹೇಳುತ್ತಿದ್ದಾನೆ


ಲ್ಯಾಟಿನ್ ಅಮೆರಿಕದ ಕಾದಂಬರಿಕಾರ ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಸಾಹಿತ್ಯದ ಮೇಲೆ ಪ್ರೀತಿ ಹೊಂದಿದವರಿಗೆಲ್ಲ ಗೊತ್ತು.

ಆತನಿಗೀಗ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್. ಎರಡನೆಯದೋ ಮೂರನೆಯದೋ ಹಂತದಲ್ಲಿರುವ ಅದು ಆತನ ಜೀವ ಹಿಂಡುತ್ತಿದೆ.

ಹಾಗಾಗಿ ಆತ ಸಾರ್ವಜನಿಕ ಜೀವನಕ್ಕೆ ಗುಡ್‌ಬೈ ಹೇಳಿದ್ದಾನೆ. ಇನ್ನು ಆತ ಭಾಷಣ ಮಾಡುವುದಿಲ್ಲ, ಫೋಟೋಗೆ ಪೋಸ್ ನೀಡುವುದಿಲ್ಲ, ಸಂದೇಶಗಳನ್ನು ಕೊಡುವುದಿಲ್ಲ.

ಬಹುಶಃ, ಏನನ್ನೂ ಬರೆಯುವುದೂ ಇಲ್ಲ.

‘ನೂರು ವರ್ಷದ ಏಕಾಂತ’ಕ್ಕೆ ತೆರಳುವ ಮುನ್ನ ತನ್ನ ಗೆಳೆಯರಿಗೆ, ಆತ್ಮೀಯರಿಗೆ ಸಂದೇಶವೊಂದನ್ನು ಕಳಿಸಿದ್ದಾನೆ. ಅದನ್ನು ನನ್ನ ಆತ್ಮೀಯರೊಬ್ಬರು ನನಗೆ ಕಳಿಸಿದರು. ನಿಮಗೆ ಅದನ್ನು ಹಂಚದೆ ಇರಲು ನನ್ನಿಂದ ಸಾಧ್ಯವೇ ಇಲ್ಲ ಅನಿಸಿತು.

ಅದು ಹೀಗಿದೆ :

“ನಾನೊಂದು ಕೇವಲ ಗೊಂಬೆ ಎಂಬುದನ್ನು ಮರೆತು, ದೇವರು ನನಗೆ ಇನ್ನೊಂದು ಜೀವನದ ತುಣುಕನ್ನು ನೀಡಿದರೆ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಅದನ್ನು ವಿನಿಯೋಗಿಸಲು ಯತ್ನಿಸುವೆ.

ನಾನು ಯೋಚಿಸಿರುವುದನ್ನೆಲ್ಲ ಹೇಳಲು ಆಗುತ್ತದೋ ಇಲ್ಲವೋ. ಆದರೆ ಹೇಳುವುದನ್ನೆಲ್ಲ ಯೋಚಿಸಿರುತ್ತೇನೆ.
ಯೋಚನೆಗಳು, ವಸ್ತುಗಳು ಎಷ್ಟು ಬೆಲೆ ಬಾಳುತ್ತವೆಂದಲ್ಲ, ಏನನ್ನು ಪ್ರತಿನಿಸುತ್ತವೆ ಎಂದು ಮೌಲ್ಯ ಕಟ್ಟುತ್ತೇನೆ.

ಕಡಿಮೆ ನಿದ್ರಿಸುತ್ತೇನೆ, ಹೆಚ್ಚು ಕನಸುತ್ತೇನೆ. ನಾವು ಕಣ್ಣು ಮುಚ್ಚಿಕೊಂಡಿರುವ ಪ್ರತಿ ನಿಮಿಷಕ್ಕೂ ೬೦ ಸೆಕೆಂಡುಗಳಷ್ಟು ಬೆಳಕು ನಷ್ಟವಾಗುತ್ತಿರುತ್ತದೆ.
ಎಲ್ಲ ಇತರರು ನಿಂತಿರುವರೋ ಅಲ್ಲಿ ಮುಂದುವರಿಯುವೆ ; ಎಲ್ಲಿ ಇತರರು ಮಲಗಿರುವರೋ ಅಲ್ಲಿ ಎದ್ದಿರುವೆ.

ಇನ್ನೊಂದು ತುಣುಕು ಜೀವನವನ್ನು ನನಗೆ ದೇವರು ನೀಡಿದರೆ...ಸರಳವಾಗಿ ಬಟ್ಟೆ ಧರಿಸಿ, ಕಿರಣಗಳಲ್ಲಿ ಹೊರಳಾಡಿ, ದೇಹವನ್ನಷ್ಟೇ ಅಲ್ಲ ಆತ್ಮವನ್ನೂ ಬೆಳಕಿಗೆ ತೆರೆದುಕೊಂಡಿರುತ್ತೇನೆ.

ವೃದ್ಧರಾದಂತೆ ಪ್ರೇಮಿಸುವುದು ಕಡಿಮೆಯಾಗುತ್ತದೆ ಎಂಬ ತಿಳಿವಳಿಕೆ ಎಷ್ಟು ತಪ್ಪೆಂದೂ, ಪ್ರೇಮಿಸದಿರುವುದರಿಂದಲೇ ವೃದ್ಧರಾಗುತ್ತೇವೆಂದೂ ಸಾಸಿ ತೋರಿಸುತ್ತೇನೆ.

ಮಕ್ಕಳಿಗೆ ರೆಕ್ಕೆಗಳನ್ನು ನೀಡುತ್ತೇನೆ, ಆದರೆ ಸ್ವತಂತ್ರವಾಗಿ ಹಾರಲು ಬಿಡುತ್ತೇನೆ.
ವಯಸ್ಸಾದಂತೆ ಸಾವು ಸನಿಹವಾಗುವುದಲ್ಲ, ಅದು ವಿಸ್ಮೃತಿಯಿಂದ ಎಂದು ವೃದ್ಧರಿಗೆ ತಿಳಿಹೇಳುತ್ತೇನೆ.

ನಾನು ನಿಮ್ಮಿಂದ ಎಷ್ಟೊಂದು ಕಲಿತೆ...

ಏರುವ ಪರಿಶ್ರಮದ ಕುರಿತು ಚಿಂತಿಸುವುದನ್ನು ಮರೆತು ಎಲ್ಲರೂ ಬೆಟ್ಟದ ತುದಿಯಲ್ಲಿ ಬದುಕಬೇಕು ಎಂದು ಚಿಂತಿಸುತ್ತಾರೆ ಎಂಬುದನ್ನು ; ಹಸುಳೆಯೊಂದು ತಂದೆಯ ಹೆಬ್ಬೆರಳು ತಬ್ಬಿಕೊಂಡರೆ ಅದು ಶಾಶ್ವತ ಬಾಂಧವ್ಯ ಬಯಸುತ್ತಿದೆ ಎಂಬುದನ್ನು ; ತನ್ನಿಂದ ಕೆಳಗಿರುವವರನ್ನು ನೋಡುವ ಹಕ್ಕು ಅವರನ್ನು ಎತ್ತಬಯಸುವವನಿಗೆ ಮಾತ್ರ ಇರುತ್ತದೆ ಎಂಬುದನ್ನು...


ಯಾವತ್ತೂ ನೀವು ಸ್ಪಂದಿಸಿರುವುದನ್ನೇ ಹೇಳಿ, ಯೋಚಿಸಿರುವುದನ್ನೇ ಮಾಡಿ.


ಇದೇ ಕೊನೆಯ ಬಾರಿಗೆ ನಾನು ನಿಮ್ಮನ್ನು ನೋಡುತ್ತಿರುವುದು ಎಂದು ನನಗೆ ಗೊತ್ತಾದರೆ, ಆಗ ನಾನು ನಿಮ್ಮ ಆತ್ಮದ ಪೋಷಕನಂತೆ ಬಿಗಿಯಾಗಿ ತಬ್ಬಿಕೊಳ್ಳುವೆ. ಇವೇ ನನ್ನ ಕೊನೆಯ ಕ್ಷಣಗಳು ಎಂದು ನನಗೆ ಗೊತ್ತಾದರೆ ನಾನು ನಿಮಗೆ ‘ಐ ಲವ್ ಯು’ ಎಂದು ಹೇಳಬಯಸುವೆ. ಅದು ನಿಮಗೆ ಅರ್ಥವಾಗುತ್ತದೋ ಇಲ್ಲವೋ ಎಂಬುದನ್ನು ಯೋಚಿಸಲಾರೆ.


ಯಾವಾಗಲೂ ಇನ್ನೊಂದು ಬೆಳಗು ಇರುತ್ತದೆ ; ಎಲ್ಲವನ್ನು ಉತ್ತಮಗೊಳಿಸಲು ಜೀವನ ನಮಗೆ ಮತ್ತೊಂದು ಅವಕಾಶ ಕೊಡುತ್ತದೆ.


ಯಾವಾಗಲೂ ನಿಮ್ಮ ಪ್ರೀತಿಪಾತ್ರರ ಸನಿಹದಲ್ಲಿರಿ ; ನೀವು ಅವರನ್ನು ಎಷ್ಟೊಂದು ಪ್ರೀತಿಸುತ್ತೀರಿ ಹಾಗೂ ನಿಮಗೆ ಅವರ ಅಗತ್ಯ ಎಷ್ಟಿದೆ ಎಂಬುದನ್ನು ಹೇಳುತ್ತಿರಿ ; ನಿಮಗೆ ಗೊತ್ತಿರುವ ಎಲ್ಲ ಪ್ರೀತಿ ತುಂಬಿದ ಪದಗಳನ್ನು ಬಳಸಿ.


ನಿಮ್ಮ ಯೋಚನೆಗಳು ಗುಪ್ತವಾಗಿಯೇ ಇದ್ದರೆ ನಿಮ್ಮನ್ನು ಯಾರೂ ನೆನೆಯಲಾರರು ; ಅವುಗಳನ್ನು ಅಭಿವ್ಯಕ್ತಿಗೊಳಿಸಿ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ತೋರಿಸಿ.


ಈ ಸಂದೇಶವನ್ನು ನೀವು ಪ್ರೀತಿಸುವ ಎಲ್ಲರಿಗೆ ಕಳಿಸಿ.

ನೀವು ಕಳಿಸದಿದ್ದರೆ, ನಾಳೆಯು ಕೂಡ ಇಂದಿನಂತೆಯೇ ಇರುತ್ತದೆ.

ಇದೀಗ ನಿಮ್ಮ ಸಂದೇಶದ ಸಮಯ.


ನಿಮ್ಮ ಪ್ರೀತಿಯ -
- ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್"

Sunday, July 12, 2009

ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು...


ಅವರು ಮೊದಲು ಕಮ್ಯುನಿಸ್ಟರಿಗಾಗಿ ಬಂದರು.
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಮ್ಯುನಿಸ್ಟನಾಗಿರಲಿಲ್ಲ.

ಆಮೇಲೆ ಅವರು ಯಹೂದಿಗಳಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ.

ನಂತರ ಅವರು ಕಾರ್ಮಿಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕಾರ್ಮಿಕನಾಗಿರಲಿಲ್ಲ.

ಬಳಿಕ ಅವರು ಕೆಥೊಲಿಕ್ಕರಿಗಾಗಿ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಪ್ರೊಟೆಸ್ಟೆಂಟನಾಗಿದ್ದೆ.

ಕೊನೆಗೆ ಅವರು ನನಗಾಗಿಯೇ ಬಂದರು
ಆ ಹೊತ್ತಿಗೆ ನನ್ನ ಪರ ಮಾತನಾಡಲು
ಯಾರೂ ಉಳಿದಿರಲಿಲ್ಲ.

*
ಈ ಪದ್ಯವನ್ನು ಬರೆದವನು ಜರ್ಮನಿಯ ಮಾರ್ಟಿನ್ ನೀಮ್ಯುಲರ್ (೧೮೯೨- ೧೯೮೪) ಎಂಬ ಪಾದ್ರಿ. ನಾಝಿ ದೌರ್ಜನ್ಯ ಹಾಗೂ ಯಹೂದಿ ಜನಾಂಗಹತ್ಯೆಯ ವಿರುದ್ಧ ಮಾತನಾಡಿದವನು. ಈತ ಬರೆದ ಈ ಪದ್ಯ ಈತನಿಗಿಂತ ಪ್ರಸಿದ್ಧ.

*
ಮೈಸೂರಿನಲ್ಲಿ ನನ್ನ ಒಬ್ಬ ಗೆಳೆಯನಿದ್ದಾನೆ. ಆತ ನಿನ್ನೆ ಫೋನ್ ಮಾಡಿ ಹೀಗೆ ಹೇಳಿದ :

ಅವರು ಮೊದಲು ಅಯೋಧ್ಯೆಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಅಯೋಧ್ಯೆಯಲ್ಲಿರಲಿಲ್ಲ.

ಬಳಿಕ ಅವರು ಗುಜರಾತಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಗುಜರಾತಿನಲ್ಲಿರಲಿಲ್ಲ.

ನಂತರ ಅವರು ಕರಾವಳಿಗೆ ಬಂದರು
ನಾನು ಮಾತನಾಡಲಿಲ್ಲ
ಯಾಕೆಂದರೆ ನಾನು ಕರಾವಳಿಯಲ್ಲೂ ಇರಲಿಲ್ಲ.

ಕೊನೆಗೆ ಅವರು ಮೈಸೂರಿಗೇ ಬಂದರು
ನಾನು ಈಗಲೂ ಮಾತನಾಡುವುದಿಲ್ಲ
ಯಾಕೆಂದರೆ ಅವರು ಬಂದದ್ದು ನನಗಾಗಿಯಲ್ಲ !

*
ಇತರರು ‘ಮೈಸೂರು’ ಎಂದಿದ್ದಲ್ಲಿ ತಮ್ಮ ಊರಿನ ಹೆಸರು ಸೇರಿಸಿ ಓದಿಕೊಳ್ಳಬಹುದು.