Saturday, December 20, 2008

ಬಂತೋ ಬಂತು ಕಾಲದ ನಾವೆ


ಅಪಾರ ಕಾಲದ ಕಡಲನ್ನು ದಾಟಿ ಬಂದ ಪುಟ್ಟ ನಾವೆಯೊಂದು ಇದೀಗ ನಮ್ಮ ನಿಮ್ಮ ಬದುಕಿನ ಬಂದರಿನಲ್ಲಿ ಲಂಗರು ಹಾಕಿದೆ. ನಾವೆಗೆ ಹನ್ನೆರಡು ಹಾಯಿಗಳು, ಇಪ್ಪತ್ನಾಲ್ಕು ಹಗ್ಗಗಳು, ಒಂದೇ ಒಂದು ಮೀಟುಗೋಲು. ಪಟಪಟಿಸುವುದು ಹಾಯಿ, ಕರೆಯುವುದು ದೂರ ತೀರಕ್ಕೆ.


ಅಂಗೈಯೊಳಗೆ ಕನಸುಗಳ ಬೆಚ್ಚನೆ ಬಚ್ಚಿಟ್ಟುಕೊಂಡ ಎಲ್ಲರ ಬದುಕಿಗೂ ಇಂಥ ಒಂದು ಪುಟ್ಟ ನಾವೆ ಬರಲಿ.
ನಿದ್ದೆಯಲ್ಲೇ ಅಕಾರಣ ನಗುವ ಸಣ್ಣ ಕಂದನ ತೊಟ್ಟಿಲಿಗೆ, ಬೆವರಿನಲ್ಲಿ ಮಿಂದ ಕೈಗಳು ಚಾಚಿದ ಅನ್ನದ ಬಟ್ಟಲಿಗೆ, ಒಳಮನೆಯ ಹಳೆ ಮಂದಿ ಕೆಮ್ಮುತ್ತ ತಡವುತ್ತ ಬಂದು ಕುಂತ ಮನೆಯ ಮೆಟ್ಟಿಲಿಗೆ ತೇಲುತ್ತ ಈ ನಾವೆ ಸಮೀಪಿಸಲಿ.


ಈಗಷ್ಟೆ ಮದುವೆಯಾಗಿ ಬಂದ ಹೊಸ ಸೊಸೆ ದೇವರೊಳಕೋಣೆಯಲ್ಲಿ ಹಚ್ಚಿಟ್ಟ ನಂದಾದೀಪಕ್ಕೆ, ತಂಟೆಕೋರ ಮಕ್ಕಳ ಮೇಲೆ ಸುಳ್ಳುಸುಳ್ಳೇ ಮುನಿಸಿಕೊಳ್ಳುವ ಹಿರಿಯರ ಕೋಪಕ್ಕೆ, ಐಸ್‌ಕ್ಯಾಂಡಿ ಮಾರಾಟವಾಗದೆ ಬಿಸಿಲಿನಲ್ಲಿ ಕರಗುತ್ತ ತಲೆ ಮೇಲೆ ಕೈಹೊತ್ತ ಶ್ರಮಜೀವಿಯ ತಾಪಕ್ಕೆ ಈ ಪುಟ್ಟ ನಾವೆ ಒದಗಿ ಬರಲಿ.


ಮಾಗಿ ಚಳಿಗೆ ಎಲೆ ಉದುರಿಸಿಕೊಂಡು ಬೋಳುಬೋಳಾಗಿ ನಿಂತ ಹಳೆಯ ಮರಗಳಿಗೆ, ದಶಂಬರದ ಫಲಗಾಳಿಗೆ ಮೆಲ್ಲನೆ ಕಂಪಿಸುತ್ತ ಹೂಗಳ ಹೊತ್ತು ಲಜ್ಜೆಯಿಂದ ನಿಂತ ಮಾಮರಗಳಿಗೆ, ಚಿಗುರಿನ ಚೊಗರಿಗೆ ಕಾತರಿಸಿ ಎಲ್ಲಿಂದಲೋ ಬರುವ ಹಕ್ಕಿಗಳಿಗೆ, ಹುಲ್ಲುಗರಿಕೆಯ ಮೇಲೆ ಮೆಲ್ಲನೆ ಇಳಿದ ಎಳಬೆಳಗಿನ ಮಿದುವಾದ ಇಬ್ಬನಿಗೆ, ಅಂಗಳದಲ್ಲಿ ರೈತನ ಉಸಿರಿನಂತೆ ಹರಡಿರುವ ಕೊಯಿಲಿಗೆ ಈ ನಾವೆಯ ಹಾಯಿ ಬೀಸಿದ ತಂಗಾಳಿ ತಾಕಲಿ.


ತಮ್ಮ ಕನಸುಗಳಲ್ಲಿ ಬಂದ ಚೆಲುವೆಯರ ಬೆನ್ನು ಬಿದ್ದು ಅರಸುತ್ತಿರುವ ಹುಡುಗರ ಬಿರುಸಾದ ಶ್ವಾಸಗಳಿಗೆ, ಕನ್ನಯ್ಯನಿಂದ ಮೊದಲ ಪ್ರೇಮಪತ್ರ ಬರೆಸಿಕೊಂಡು ಕುಪ್ಪಸದೊಳಗೆ ಬಚ್ಚಿಟ್ಟುಕೊಂಡ ರಾಧೆಯ ಝಲ್ಲೆನುವ ಎದೆಗೆ, ಗ್ರೀಟಿಂಗ್ಸ್ ಹಂಚುತ್ತ ಸುಸ್ತಾಗಿರುವ ಗಂಜಿ ಇಸ್ತ್ರಿಯ ಅಂಚೆಯಣ್ಣನ ಸಮವಸ್ತ್ರದೊಳಕ್ಕೆ, ದೇಹವಿಲ್ಲದೆ ಅತ್ತಿಂದಿತ್ತ ಹಾರಾಡುತ್ತ ಎಳೆನಗುವನ್ನು ಎಲ್ಲೆಡೆ ಹರಡಿಬಿಡುವ ಎಸ್ಸೆಮ್ಮೆಸ್‌ಗಳಿಗೆ ಈ ನಾವೆ ಬಂದುಬಿಡಲಿ.


ಆಸ್ಪತ್ರೆಯಲ್ಲಿರುವ ಪುಟ್ಟ ಕಂದನಿಗೆ ಹಾಲು ತರಲು ಓಡುತ್ತಿರುವ ಎಳೆ ತಾಯಿಯ ಫ್ಲಾಸ್ಕಿಗೆ, ಕಚೇರಿಯಿಂದ ಹಿಂದಿರುಗುವಾಗ ಮಕ್ಕಳಿಗೆ ಸಿಹಿ ತರಲು ಮರೆಯಿತೆಂದು ಚಡಪಡಿಸುವ ಗುಮಾಸ್ತೆಯ ಚೀಲದೊಳಕ್ಕೆ, ಇರುಳು ನಿದ್ರೆ ತೊರೆದು ಮನೆಯನ್ನೂ ಮರೆತು ಅಕ್ಷರಗಳು ಕತೆಯಾಗುವ ನಡುವೆ ಕಳೆದುಹೋದ ಪತ್ರಕರ್ತನ ಪೆನ್ನಿಗೆ, ತಾಯಿ ಕಣ್ಣು ತೆರೆದು ಮಿಸುಕಾಡುವುದನ್ನೇ ಕಾಯುತ್ತ ಐಸಿಯು ಹೊರಗೆ ನಿಂತಿರುವ ಮಕ್ಕಳ ಕಂಗಳೊಳಕ್ಕೆ, ಲಾರಿಯಿಂದ ಗುದ್ದಿಸಿಕೊಂಡು ಮಲಗಿರುವ ಗಂಡನಿಗೆ ರಕ್ತ ನೀಡುತ್ತಿರುವ ಬಾಡಿದ ಮುಖದ ಮಹಿಳೆಯ ತೋಳುಗಳಿಗೆ- ಈ ನಾವೆ ತೇಲಿ ಬಂದು ಅಪಾರ ಬಲ ತುಂಬಲಿ.


ಮತ್ತು... ಮತ್ತು... ಎಲ್ಲಕ್ಕಿಂತ ಮುಖ್ಯವಾಗಿ, ಯಾರದೋ ಕೋಪ ತಾಪ ದ್ವೇಷಗಳಿಗೆ ಸಂಬಂದವೇ ಇಲ್ಲದಂತೆ ಬಲಿಯಾದ ಅಮಾಯಕರ ಗೋರಿಗಳಿಗೆ, ಅವರ ಬೂದಿ ಮಣ್ಣು ಮಾಡಿದ ನಡುಗುವ ಕೈಗಳಿಗೆ, ಭಯ ಆತಂಕ ದುಃಖ ಗದ್ಗದಗಳನ್ನು ಬೈತಿಟ್ಟುಕೊಂಡು ಮರುಗುತ್ತಿರುವ ದೀಪಗಳಿಲ್ಲದ ಪಡಸಾಲೆಗಳಿಗೆ ಈ ಪುಟ್ಟ ನಾವೆ ಹಾಯಿಗಳ ಬೀಸುತ್ತ ಝಗಮಗಿಸುತ್ತ ಬರಲಿ.


ಅನ್ಯಜೀವಗಳ ವಿನಾಕಾರಣ ಪ್ರೀತಿಸುವ ಎಲ್ಲರೂ ತಮ್ಮ ಕನಸುಗಳಲ್ಲಿ ಈ ಬೆರಗಿನ ನಾವೆಯನ್ನೇರಿ ವಿಸ್ಮಿತರಾಗಲಿ.

ಮುಗಿಯದ ಇತಿಹಾಸದ ಆರಂಭ

ಬೆಂಕಿಯ ನೆನಪು- ಅಂತಿಮ ಕಂತು
-೧-
ಇಸವಿ ೧೪೯೨- ಗುವಾನ್ಹನಿ
ತಿಂಗಳಿಂದಲೂ ಸರಿಯಾಗಿ ನಿದ್ದೆಯಿಲ್ಲದೆ ಬೇಗುದಿಯಲ್ಲಿದ್ದ ಕೊಲಂಬಸ್ ಮೊಣಕಾಲೂರಿ, ಗಳಗಳ ಅಳುತ್ತ ನೆಲವನ್ನು ಚುಂಬಿಸಿದ್ದಾನೆ. ಮತ್ತೆ ತಡವರಿಸುತ್ತ ಎದ್ದು ಹೆಜ್ಜೆ ಮುಂದಿಟ್ಟು ಎದುರಿಗಿರುವ ಗಿಡಗಳ ರುಂಡ ಹಾರಿಸಿದ್ದಾನೆ, ತನ್ನ ಖಡ್ಗದಿಂದ. ಮತ್ತೆ ಧ್ವಜ ಹಾರಿಸಿ, ಮೊಣಕಾಲೂರಿ ಬಾನಿಗೆ ಕಣ್ಣೊಡ್ಡಿ, ತನ್ನ ರಾಜ ಫರ್ಡಿನಾಂಡ್, ರಾಣಿ ಇಸಬೆಲ್ಲಾಳ ಹೆಸರು ಘೋಷಿಸಿದ್ದಾನೆ. ಅವನ ಪಕ್ಕ ಭಾಷಾಂತರಕಾರ, ದಸ್ತಾವೇಜು ಬರಹಗಾರ ರೊಡ್ರಿಗೋ ಡಿ ಎಸ್ಕೋಬೇಡೋ ನಿಂತಿದ್ದಾನೆ.

ಈಗ ರೊಡ್ರಿಗೋ ದಾಖಲೆ ಬರೆಯುತ್ತಾನೆ. ಇಂದಿನಿಂದ ಇವೆಲ್ಲಾ ಖಂಡಾಂತರದಾಚೆ ದೂರದ ರಾಜನಿಗೆ ಸೇರಿದ್ದು, ಹವಳದ ಸಮುದ್ರ, ಹೊಳೆವ ದಂಡೆ, ಹಸುರು ಶಿಲೆಗಳು, ಕಾಡುಗಳು, ಹಕ್ಕಿಗಳು, ಬಟ್ಟೆ... ಪಾಪ. ಹಣ ಎಂದರೆ ಏನೆಂದು ಅರಿಯದೇ ಇವರನ್ನೇ ಅರೆಬೆತ್ತಲೆ ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿರುವ ಈ ಮನುಷ್ಯರು...

ಅರೆಬೆತ್ತಲೆ ಮನುಷ್ಯರು ಬೆಪ್ಪು ಕೌತುಕತೆಯಲ್ಲಿ ನೋಡುತ್ತಿದ್ದಂತೆ ರೊಡ್ರಿಗೋ ಹೀಬ್ರೂ ಭಾಷೆಯಲ್ಲಿ ಕೇಳುತ್ತಾನೆ. ‘ಸಾಮ್ರಾಟ್ ಖಾನ್‌ನ ಸಾಮ್ರಾಜ್ಯ ಎಲ್ಲಿದೆ ? ನಿಮ್ಮ ಕಿವಿ ಮೂಗುಗಳ ಚಿನ್ನವೆಲ್ಲಿಂದ ಬಂತು ?’ ಮತ್ತೆ ಅದೇ ಬೆಪ್ಪು ಬೆರಗಿನ ಕಣ್ಣುಗಳು.

ರೊಡ್ರಿಗೋ ತನಗೆ ಗೊತ್ತಿರುವ ಅಷ್ಟಿಷ್ಟು ಚಾಲ್ಡಿಯನ್ ಭಾಷೆಯಲ್ಲಿ ಕೇಳುತ್ತಾನೆ. ‘ಚಿನ್ನ ? ದೇಗುಲ ? ಅರಮನೆಗಳು, ಸಾಮ್ರಾಟ ?’ ಮತ್ತೆ ಅರೇಬಿಕ್‌ನಲ್ಲಿ ಕೇಳುತ್ತಾನೆ. ‘ಜಪಾನ್, ಚೈನಾ, ಚಿನ್ನ ?’

ಬಳಿಕ ಕೊಲಂಬಸ್‌ನ ಕ್ಷಮೆ ಯಾಚಿಸುತ್ತಾನೆ. ಕೊಲಂಬಸ್ ಹತಾಶೆಯಲ್ಲಿ ಶಪಿಸುತ್ತಾ, ಸಾಮ್ರಾಟ್ ಖಾನ್‌ಗೆಂದೇ ಲ್ಯಾಟಿನ್‌ನಲ್ಲಿ ಬರೆದು ತಂದಿದ್ದ ತನ್ನ ಪರಿಚಯ ಪತ್ರವನ್ನು ನೆಲಕ್ಕೊಗೆಯುತ್ತಾನೆ.

ಅರೆಬೆತ್ತಲೆ ಮನುಷ್ಯರು ತಮ್ಮ ದಡದಲ್ಲಿ ಪ್ರತ್ಯಕ್ಷವಾದ ಅಪರಿಚಿತ ಮನುಷ್ಯನ ಕ್ರೋಧವನ್ನು ಗಮನಿಸಿದ್ದಾರೆ. ಅಲೆಅಲೆಯಾಗಿ ಸಂದೇಶ ಹರಡುತ್ತದೆ.

‘ಬಾನಿಂದಿಳಿದ ಮನುಷ್ಯರನ್ನು ನೋಡಬನ್ನಿ. ಕುಡಿಯಲು ಪಾನೀಯ, ತಿನ್ನಲು ಆಹಾರ ತನ್ನಿ.’
-೨-
ನೆರುಡಾನ ಮನೆ
ಇಸವಿ ೧೯೭೩
ಈ ವಿನಾಶದ ಮಧ್ಯೆ, ಛಿದ್ರಗೊಂಡ ಮನೆಯಲ್ಲಿ ಕವಿ ನೆರುಡಾ ಅಸು ನೀಗಿದ್ದಾನೆ. ಕ್ಯಾನ್ಸರಿನಿಂದ, ದುಃಖದಿಂದ. ಅವನು ಸತ್ತರೆ ಸಾಲದು, ಅವನ ವಸ್ತುಗಳು ನಾಶವಾಗಬೇಕು ಎಂದು ಮಿಲಿಟರಿ ಆಡಳಿತ ನಿರ್ಧರಿಸಿದೆ.

ಅದಕ್ಕೇ ಪುಂಡ ಸೈನಿಕರು ಅವನ ಟೇಬಲ್ಲು, ಮಂಚವನ್ನು ಒಡೆದು ಹಾಕಿದ್ದಾರೆ. ನೆಲಹಾಸನ್ನು ಚಿಂದಿ ಮಾಡಿದ್ದಾರೆ. ಪುಸ್ತಕಗಳ ಸಂಗ್ರಹವನ್ನು ಸುಟ್ಟು ಹಾಕಿದ್ದಾರೆ. ಅವನ ಅಮೂಲ್ಯ ದೀಪಗಳು, ಬಣ್ಣದ ವೈವಿಧ್ಯಮಯ ವಿನ್ಯಾಸದ ಬಾಟಲುಗಳನ್ನು, ಕಂಭಗಳನ್ನು, ಪೇಂಟಿಂಗ್‌ಗಳನ್ನು, ಚಿಪ್ಪಿನ ಸಂಗ್ರಹವನ್ನು ವ್ಯವಸ್ಥಿತವಾಗಿ ಪುಡಿಮಾಡಿ ನಾಶ ಮಾಡಿದ್ದಾರೆ. ಗೋಡೆ ಗಡಿಯಾರದ ಪೆಂಡ್ಯುಲಮ್ಮನ್ನು ಕಿತ್ತು ಹಾಕಿದ್ದಾರೆ. ಗೋಡೆಯಲ್ಲಿದ್ದ ಅವನ ಪತ್ನಿಯ ತೈಲಚಿತ್ರದ ಹೊಳೆವ ಕಣ್ಣುಗಳನ್ನು ಬಯೊನೆಟ್ಟಿನಿಂದ ಚುಚ್ಚಿ ಕಿತ್ತಿದ್ದಾರೆ.

ನೀರು ಕೆಸರು ತುಂಬಿದ ಭಗ್ನ ಮನೆಯಿಂದ ಕವಿ ಸ್ಮಶಾನಕ್ಕೆ ಯಾತ್ರೆ ಹೊರಟಿದ್ದಾನೆ. ಕವಿಯ ಆಪ್ತಮಿತ್ರರು ಶವಪೆಟ್ಟಿಗೆ ಹೊತ್ತಿದ್ದಾರೆ. ಮಾಟೆಲ್ಡಾ ಉರುಶಿಯಾ ಯಾತ್ರೆಯನ್ನು ಮುನ್ನಡೆಸಿದ್ದಾಳೆ.

‘ನೀನಿರುವಾಗ ಬದುಕೋದು ಎಷ್ಟು ಸುಂದರ’ ಎಂದು ನೆರುಡಾ ಆಕೆಯ ಬಗ್ಗೆ ಬರೆದಿದ್ದ.

ಒಂದೊಂದೇ ಬೀದಿ ದಾಟುತ್ತಿದ್ದಂತೆ ಶವಯಾತ್ರೆಯ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.ಮಿಲಿಟರಿ ಟ್ರಕ್‌ಗಳು, ಮೆಶಿನ್‌ಗನ್ ಹಿಡಿದ ಸೈನಿಕರು, ಬೈಕ್‌ನಲ್ಲಿರುವ ಪಹರೆ ಪೊಲೀಸರು, ಭಯ ದಮನದ ಬೀಜ ಬಿತ್ತುತ್ತಿದ್ದರೂ ಜನತೆ ಸ್ಪಂದಿಸಿದೆ. ಮನೆಗಳ ಬಾಲ್ಕನಿಯಿಂದ ಕರವಸ್ತ್ರಗಳು ಧ್ವಜದಂತೆ ಹಾರಾಡಿವೆ. ಕಿಟಕಿಯ ಹಿಂದೆ ಕೈಗಳು ವಂದಿಸಿ ವಿದಾಯ ಹೇಳಿವೆ.ಹನ್ನೆರಡು ದಿನಗಳ ಕ್ರೌರ್‍ಯ ಆಘಾತಗಳ ಬಳಿಕ ಈಗ ಹೋರಾಟದ ಹಾಡೊಂದು ಪಿಸುಗುಟ್ಟಿದೆ.ತಪ್ತ ದುಃಖದಲ್ಲಿ ಗುನುಗಿದೆ. ನೋಡನೋಡುತ್ತಿದ್ದಂತೆ ಜನರ ಸಾಲು ಮೆರವಣಿಗೆಯಾಗಿದೆ. ಮೆರವಣಿಗೆ ಜನಸಾಗರವಾಗಿದೆ. ಭಯದ ವಿರುದ್ಧ ಜನತೆ ಸಾಂಟಿಯಾಗೋದ ಬೀದಿಗಳಲ್ಲಿ ಎದೆ ಸೆಟೆಸಿ ನಡೆದಿದ್ದಾರೆ, ದನಿ ಎತ್ತಿ ಹಾಡಿದ್ದಾರೆ.

ನೆರುಡಾನಿಗೆ, ಕವಿ ನೆರುಡಾನಿಗೆ, ತಮ್ಮ ಕವಿ ನೆರುಡಾನಿಗೆ, ತಮ್ಮ ಮಣ್ಣಿನ ಕವಿ ನೆರುಡಾನಿಗೆ, ಅವನು ಹೆಮ್ಮೆ ಪಡಬಹುದಾದ ರೀತಿಯಲ್ಲಿ, ಅವನ ಅಂತಿಮ ಯಾತ್ರೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

Sunday, December 14, 2008

ಬೇಕು ಬೆಂಕಿಯ ಸಂಗ

‘ಬೆಂಕಿಯ ನೆನಪು - ಭಾಗ ಎರಡು -

‘ಬೆಂಕಿಯ ನೆನಪು’ ಕೃತಿಯ ಬಗ್ಗೆ ಏನು ಬರೆಯಹೊರಟರೂ ನನ್ನ ಕೈ ತಡೆಯುತ್ತದೆ ; ಅದಕ್ಕೆ ಕಾರಣ ಅದು ಉಕ್ಕಿಸುವ ಆಕ್ರಮಣ, ದೌರ್ಜನ್ಯ, ಅಮಾನವೀಯತೆ, ಹೋರಾಟ, ಚಳವಳಿ, ಕ್ರಾಂತಿಗಳ ಉರಿಯುವ ನೆನಪು. ನಮ್ಮ ನಾಡಿನಲ್ಲೂ ನಡೆದ ಅನೇಕ ಚಳವಳಿಗಳ ಅವಸಾನ ; ಮೂಲಭೂತವಾದ ಹಾಗೂ ಸರ್ವಾಕಾರಗಳ ಉತ್ಥಾನವನ್ನು ನೋಡಿ, ಓದಿ ಅರಿತವರಿಗೆ ಇದು ಅರ್ಥವಾಗಬಹುದು. ಪ್ರಭುತ್ವ ಎಲ್ಲವನ್ನೂ ಹೊಸಕಿ ಹಾಕಿಬಿಡುತ್ತದೆ ; ಎಲ್ಲವನ್ನೂ.


ಹಾಗೆಂದೇ ಇದರ ಬಗ್ಗೆ ಪ್ರತ್ಯೇಕವಾಗಿ ಏನನ್ನೂ ಬರೆಯದೆ, ಮುನ್ನುಡಿಯಿಂದ ಆಯ್ದ ಎರಡು ಭಾಗವನ್ನು ನಿಮಗೆ ಕೊಡುತ್ತೇನೆ. ಇದನ್ನು ಬರೆದವರು ರೊವಿನಾ ಹಿಲ್ ಎಂಬ ವೆನಿಜುವೆಲಾದ ಕವಯಿತ್ರಿ.
**
ಲ್ಯಾಟಿನ್ ಅಮೆರಿಕಾದ ಬಗ್ಗೆ ಆಸಕ್ತಿ ಇರುವವರು ಯಾವ ಸಂಘರ್ಷಗಳು ಅದನ್ನು ರೂಪಿಸಿದವು, ಅದರ ಕಾಣ್ಕೆ, ಮೌಲ್ಯಗಳೇನು ಎಂಬುದನ್ನೆಲ್ಲಾ ಅಕಾಡೆಮಿಕ್ಕಾದ ರಾಜಕೀಯ, ಚಾರಿತ್ರಿಕ ವಿಶ್ಲೇಷಣೆಗಳ ಉದ್ಗ್ರಂಥಗಳ ಉಸಾಬರಿಗೆ ಹೋಗದೆ ಅರಿಯಬೇಕೆಂದಿರುವವರು ಎಡುವರ್ಡೊ ಗೆಲಿಯಾನೊನ ‘ಬೆಂಕಿಯ ನೆನಪು’ ಓದಬೇಕು.


ಆದರೆ ಓದುಗನಿಗೊಂದು ಮುನ್ನೆಚ್ಚರಿಕೆ. ಚರಿತ್ರಕಾರನ ಶಿಸ್ತಿನ ಜವಾಬ್ದಾರಿಯಿಂದ ನುಣುಚಿಕೊಂಡು ಮೇಲ್ಪದರ ಕೆರೆವ ವಿವರ ಇದಲ್ಲ. ಇದು ಪುನರ್ ಸೃಷ್ಟಿಸುವ ಬೆಂಕಿ ಸುಟ್ಟೀತು. ಇಲ್ಲಿನ ಪ್ರತಿಮೆ ಮತ್ತು ಪದಗಳಿಗೆ ನೀವು ಸಂವೇದನಾಶೀಲರಾಗಿದ್ದರೆ, ಇಲ್ಲಿನ ಉರಿವ ಜ್ಞಾನದುಂಡೆ ಕೆಂಡಗಳು ನಿಮ್ಮಲ್ಲಿ ಅಳಿಸಲಾರದ ಗುರುತು ಮೂಡಿಸಿಯಾವು. ಕಣ್ಣೀರು, ನಗು, ಸುಸ್ತು, ಜಿಗುಪ್ಸೆ, ಮೆಚ್ಚುಗೆ, ದಿಗ್ಭ್ರಾಂತಿ- ಹೀಗೆ ಭಾವವಲಯಗಳು ಒಂದಾದ ಮೇಲೊಂದರಂತೆ ನಿಮ್ಮನ್ನು ಆವರಿಸುತ್ತಾ ಹೋಗುತ್ತವೆ, ಈ ತುಣುಕುಗಳ ಧಾರಾವಾಹಿ ಬಿಚ್ಚಿದಂತೆಲ್ಲಾ.


ಈ ಗ್ರಂಥ ಮೂರು ಸಂಪುಟಗಳನ್ನೊಳಗೊಂಡಿದೆ. ಪ್ರತಿ ಸಂಪುಟವೂ ಚಿಕ್ಕಪುಟ್ಟ ಘಟನೆಗಳ ವಿವರ, ವಿವರಣೆ, ವ್ಯಾಖ್ಯಾನಗಳನ್ನೊಳಗೊಂಡಿದೆ. ಕೆಲವು ಕೆಲವೇ ಸಾಲು. ದೀರ್ಘವೆಂಬುದು ಎರಡು ಪುಟ ಮೀರುವುದಿಲ್ಲ.
**
ಈ ತ್ರಿವಳಿ ಸಂಪುಟಗಳ ಹಿನ್ನೆಲೆಯಲ್ಲಿ ಲ್ಯಾಟಿನ್ ಅಮೆರಿಕ ಮತ್ತು ಭಾರತ ಭೂಖಂಡಗಳೆರಡರಲ್ಲೂ ಘಟಿಸಿದ ವಸಾಹತುಶಾಹಿ ಪ್ರಕ್ರಿಯೆ ಮತ್ತು ತದನಂತರ ನಮಗೆ ಅಂಟಿಕೊಂಡ ‘ತೃತೀಯ ವಿಶ್ವ’ ಸ್ಥಾನಮಾನದ ಇತಿಹಾಸವನ್ನು ಯಾರಾದರೂ ತೌಲನಿಕವಾಗಿ ಅಧ್ಯಯನ ಮಾಡಬೇಕು.


ಭಾರತವನ್ನು ಜಯಿಸಿದ ಬ್ರಿಟಿಷರು ಭಾರತೀಯರೊಂದಿಗೆ ಹೆಚ್ಚೇನೂ ಬೆರೆಯಲಿಲ್ಲ. ಇಲ್ಲಿ ಚದುರಿದಂತಿರುವ ಆಂಗ್ಲೋ ಇಂಡಿಯನ್ನರ ಸಂಖ್ಯೆಯೂ ನಗಣ್ಯ. ಆದರೆ ಲ್ಯಾಟಿನ್ ಅಮೆರಿಕದ ಮೇಲಿನ ಆಕ್ರಮಣ ಅಕ್ಷರಶಃ ಅಲ್ಲಿನ ಮಹಿಳೆಯರ ಮೇಲೆ ನಡೆದ ಆಕ್ರಮಣ. ಇಂಡಿಯನ್ ಗಂಡಸರ ಸಮೂಹ ಹತ್ಯೆಯಾದ ಬೆನ್ನಿಗೇ ಈ ದೈಹಿಕ ಅತ್ಯಾಚಾರವೂ ನಡೆಯುತ್ತಾ ಬಂದಿತ್ತು. ಉದಾಹರಣೆಗೆ ಇಂದಿನ ವೆನಿಜುವೆಲಾದ ಬಹುಪಾಲು ಜನಸಂಖ್ಯೆಯ ಪೂರ್ವಿಕರು ಕೇವಲ ಮೂವತ್ತು ಮಂದಿ ಸ್ಪಾನಿಶ್ ದಾಳಿಕೋರರು !


ಹೊಸ ವ್ಯಕ್ತಿತ್ವಕ್ಕಾಗಿನ ಪ್ರಯತ್ನ, ಪ್ರಭಾವ, ಒತ್ತಡಗಳನ್ನು ಅರಗಿಸಿಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಅಕ್ಷರಶಃ ಭೌತಿಕ. ಇಂದು ಈ ಸಂಕರ ಜನಾಂಗದ ಸಂಖ್ಯೆ ಮೂಲನಿವಾಸಿಗಳಿಗಿಂತಲೂ ಹೆಚ್ಚು ಎಂಬುದೇ ಈ ದುರಂತಕ್ಕೆ ಸಾಕ್ಷಿ.


ಆದರೆ ಭಾರತದಲ್ಲಿ ವಸಾಹತುಶಾಹಿ ಅನುಭವ ಮತ್ತು ಅರಗಿಸಿಕೊಳ್ಳುವಿಕೆ ಮೂಲತಃ ಸಾಂಸ್ಕೃತಿಕ ಸ್ವರೂಪದ್ದು.
ವಸಾಹತುಶಾಹಿ ಪ್ರಕ್ರಿಯೆ ವಿಭಿನ್ನ ಚರಿತ್ರೆಗಳನ್ನು ಸೃಷ್ಟಿಸಿದೆ. ಆದರೆ ಗಾರ್ಸಿಯಾ ಮಾರ್ಕ್ವೆಜ್ ಹೇಳಿದಂತೆ, ಜಾಗತೀಕರಣ ಯುಗದಲ್ಲಿ ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ ಲ್ಯಾಟಿನ್ ಅಮೆರಿಕಕ್ಕೂ ಒಂದೇ.


ಆದ್ದರಿಂದಲೇ ಈ ಹೋರಾಟದಲ್ಲಿ ನಾವು ಪರಸ್ಪರರನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸುತ್ತಾ, ಅರ್ಥೈಸಿಕೊಳ್ಳುತ್ತಾ, ಬೆಂಬಲಿಸುತ್ತಾಕ್ರಿಯಾಶೀಲರಾಗಬೇಕೇ ಹೊರತು ಮುಂದುವರಿದ ದೇಶಗಳನ್ನು ನಮ್ಮ ಲಕ್ಷ್ಯವಾಗಿಟ್ಟುಕೊಂಡಿರಬಾರದು.
**


ಮುಂದಿನ ಕಂತಿನಲ್ಲಿ ಕೃತಿಯ ಹೃದಯಂಗಮವಾದ ಎರಡು ತುಣುಕುಗಳೊಂದಿಗೆ ಇದನ್ನು ಮುಗಿಸುತ್ತೇನೆ.

Friday, December 5, 2008

ಬೆಂಕಿಯಂಥ ನೆನಪು, ನೆನಪಿನ ಬೆಂಕಿ




ವಿಮರ್ಶೆಯ ಅಹಂಕಾರದಂತೆಯೇ ವಿಮರ್ಶೆಯ ಮೌನವೂ ಅಪಾಯಕಾರಿ. ಒಳ್ಳೆಯ ಕೃತಿಗಳಿಗೆ ಸಕಾಲದಲ್ಲಿ ಸೂಕ್ತ ವಿಮರ್ಶೆ, ಪ್ರಚಾರ ಸಿಗದೆ ಹೋದರೆ ಅವು ಪಡೆಯಬೇಕಾದ ಸ್ಥಾನಮಾನ ಪಡೆಯುವುದೇ ಇಲ್ಲ. ಕೆ.ಪಿ.ಸುರೇಶರ ‘ಬೆಂಕಿಯ ನೆನಪು’ ಇಂಥ ಒಂದು ಕೃತಿ. ಇದು ಪ್ರಕಟವಾಗಿ ಮೂರು ವರ್ಷಗಳಾಗಿವೆ.
ಇದೊಂದು ಅನುವಾದ. ಮೂಲಕೃತಿ ಲ್ಯಾಟಿನ್ ಅಮೆರಿಕಾದ ಉರುಗ್ವೇಯ ಎಡುವರ್ಡೊ ಗೆಲಿಯಾನೊ ಎಂಬವನದು. ಇಲ್ಲಿನ ಹೆಮಿಂಗ್ವೆ, ಮಾರ್ಕ್ವೆಜ್ ಮುಂತಾದ ಪ್ರಖರ ಪ್ರತಿಭೆಗಳ ಮುಂದೆ ಈತ ನಮಗೆ ಕಾಣುವುದೇ ಇಲ್ಲ. ಇದಕ್ಕೂ ‘ಸೆಲೆಕ್ಟಿವ್ ಕ್ರಿಟಿಸಿಸಂ’ ಒಂದು ಕಾರಣ ಇದ್ದೀತು.
ಈತ ಎಂಥ ಅದ್ಭುತ ಪ್ರತಿಭೆ ಎಂದರೆ, ಮೂರನೇ ಜಗತ್ತಿನ ಯಾವ ಲೇಖಕನೂ ಮಾಡದಿದ್ದ ಮಹಾನ್ ಕೆಲಸವೊಂದನ್ನು ಮಾಡಿದ ; ಅದೆಂದರೆ ತನ್ನ ಇಡೀ ಖಂಡದ ಚರಿತ್ರೆಯನ್ನು ಪುನಃ ರಚಿಸಿದ. ಇದು ಮಹಾಕಾವ್ಯಗಳನ್ನು ಬರೆಯುವುದಕ್ಕಿಂತಲೂ ಕಠಿಣವಾದ ಕೆಲಸ. ಯಾಕೆಂದರೆ ಕಾವ್ಯ ಬರೆಯುವುದಕ್ಕೆ ಮುಕ್ಕಾಲು ಪಾಲು ಕಲ್ಪನೆ ಸಾಕು ; ಚರಿತ್ರೆ ಬರೆಯುವುದಕ್ಕೆ ಅಥೆಂಟಿಸಿಟಿ ಬೇಕು.
ಇಷ್ಟರಿಂದ, ಗೆಲಿಯಾನೊ ಇತಿಹಾಸಕಾರನಷ್ಟೇ ಅಂತ ತೀರ್ಮಾನಿಸಿಬಿಟ್ಟೀರಿ ! ಇವನ ಕವಿ, ಕಥನಕಾರ, ಕಾದಂಬರಿಕಾರ, ಪ್ರಬಂಧಕಾರ ಕೂಡ. ಪುರಾಣ ಜಾನಪದಗಳಿಂದ ಕತೆಗಳನ್ನು ಹೆಕ್ಕಿ ತೆಗೆದು ಸುಸಂಬದ್ಧವಾಗಿ ಜೋಡಿಸುವ ಸಂಶೋಧನಕಾರ ಕೂಡ.
ಇವೆಲ್ಲವೂ ಸೇರಿ ಇವನ ‘ಮೆಮೊರೀಸ್ ಆಫ್ ಫೈರ್’ ಎಂಬ ಕೃತಿ ತ್ರಿವಳಿಯನ್ನು ರೂಪಿಸಿವೆ. ಇದರಲ್ಲಿ ಆತ ಲ್ಯಾಟಿನ್ ಅಮೆರಿಕದ ಪುರಾಣ, ಜಾನಪದ ಕತೆಗಳು ಹಾಗೂ ಇತಿಹಾಸ- ವರ್ತಮಾನದ ಘಟನೆ-ವಿವರಗಳನ್ನು ಕಾವ್ಯಾತ್ಮಕವಾಗಿ ದಾಖಲಿಸುತ್ತ ಹೋಗುತ್ತಾನೆ. ಆ ಮೂಲಕ, ಇಡೀ ಖಂಡದ ಪರ್‍ಯಾಯ ಚರಿತ್ರೆಯೊಂದನ್ನು ಕಟ್ಟುತ್ತಾನೆ.
ಮುಂದಿನ ಒಂದೆರಡು ಕಂತುಗಳಲ್ಲಿ ಈ ಕೃತಿಯ ಬಗ್ಗೆ ವಿಸ್ತೃತ ಅವಲೋಕನವನ್ನು ನೀಡುತ್ತೇನೆ. ಅದಕ್ಕೆ ಮುನ್ನ, ಕೃತಿಯ ಮೊದಲ ಭಾಗದಲ್ಲಿ ಬರುವ ಕೆಲವು ಜನಪದೀಯ ಕಥನಗಳ ತುಣುಕುಗಳನ್ನು ಹಾಗೇ ನಿಮ್ಮ ಮುಂದಿಡುತ್ತೇನೆ.
-೧-
ಪ್ರಣಯ
ಅಮೆಜಾನಿನ ಕಾಡಲ್ಲಿ ಮೊದಲ ಹೆಣ್ಣನ್ನು ಮೊದಲ ಗಂಡು ನೋಡಿದ. ಇಬ್ಬರೂ ಪರಸ್ಪರ ಕುತೂಹಲದಿಂದ ವೀಕ್ಷಿಸಿದರು. ತಮ್ಮ ಕಾಲುಗಳ ಮಧ್ಯೆ ಇರುವುದು ವಿಚಿತ್ರವಾಗಿ ಕಂಡಿತು.
"ನಿನ್ನದನ್ನು ಕತ್ತರಿಸಿ ತೆಗೆದದ್ದಾ ?" ಗಂಡು ಕೇಳಿದ.
"ಇಲ್ಲ ಮೊದಲಿಂದಲೂ ಹಾಗೇ..." ಹೆಣ್ಣು ಉತ್ತರಿಸಿದಳು. ಅವನು ಅವಳನ್ನು ಕೂಲಂಕುಷವಾಗಿ ಪರೀಕ್ಷಿಸಿ ತಲೆ ಕೆರೆದುಕೊಂಡ. ಅಲ್ಲೊಂದು ಬಿರಿದ ಗಾಯವಿತ್ತು.
"ಹೂ, ನೋಡು. ಬಿರಿಯೋ ಹಣ್ಣುಗಳನ್ನು ತಿಂದರೆ ಹೀಗಾಗುತ್ತೋ ಏನೋ. ಅಂಥ ಹಣ್ಣುಗಳನ್ನು ತಿನ್ನಬೇಡ. ಈಗ ನೀನು ವಿಶ್ರಾಂತಿ ತೆಗೆದುಕೋ. ಪಥ್ಯ ಮಾಡು. ನಾನು ಔಷ ನೀಡಿ ಗುಣಪಡಿಸ್ತೀನಿ" ಎಂದು ಸಮಾಧಾನಿಸಿದ. ಹೆಣ್ಣು ತಲೆಯಾಡಿಸಿ ಮಂಚದಲ್ಲಿ ಮಲಗಿದಳು. ಗಂಡು ತಾಳ್ಮೆಯಿಂದ, ಬೇರುನಾರು ಅರೆದು ಲೇಪ ಹಚ್ಚಿ ಕಷಾಯ ಕುಡಿಸಿ ಶುಶ್ರೂಷೆ ಮಾಡತೊಡಗಿದ.
ಎಷ್ಟು ದಿನ ಕಳೆದರೂ ಏನೂ ಫಲ ಕಾಣಲಿಲ್ಲ. ಅವಳಿಗೋ ಪಥ್ಯದಿಂದಾಗಿ ಹಣ್ಣು ಹಂಪಲು ನೆನಪಾಗಿ ಬಾಯಲ್ಲಿ ನೀರೂರುತ್ತಿತ್ತು. ಆದರೂ ಗಂಡಿನ ಶ್ರದ್ಧೆ ಕಂಡು ಸುಮ್ಮನಿದ್ದಳು.
ಒಂದು ದಿನ ಆತ ಏದುಸಿರು ಬಿಡುತ್ತಾ ತೊರೆದಾಟಿ ಓಡೋಡಿ ಬಂದು, ‘ನಂಗೊತ್ತಾಯ್ತು, ಗುಣಪಡ್ಸೋದು ಹೇಗೆ ಅಂತ ನಂಗೊತ್ತಾಯ್ತು’ ಎಂದು ಉದ್ವೇಗದಲ್ಲಿ ಕಿರುಚಿದ. ಆಗಷ್ಟೇ ಗಂಡುಕೋತಿ ಹೆಣ್ಣುಕೋತಿಯನ್ನು ಗುಣಪಡಿಸುತ್ತಿರುವುದನ್ನು ಆತ ನೋಡಿದ್ದ.
"ಹೇಗೆ ಗೊತ್ತಾ... ಹೀಗೆ" ಎಂದು ಆತ ಹೆಣ್ಣಿನ ಬಳಿ ಸಾರಿದ. ದೀರ್ಘ ಅಪ್ಪುಗೆ ಕೊನೆಗೊಂಡಾಗ ಗಾಳಿ ತುಂಬಾ ಹೂಗಂಧ. ದೇಹಗಳೆರಡೂ ಹೊಸ ಹೊಳಪಲ್ಲಿ ಥಳಥಳಿಸುತ್ತಿತ್ತು. ಎಲ್ಲ ಅಷ್ಟು ಸುಂದರ. ಸೂರ್‍ಯ ದೇವಾದೇವತೆಗಳಿಗೆಲ್ಲಾ ಇದನ್ನು ಕಂಡು ಸತ್ತೇ ಹೋಗುವಷ್ಟು ಮುಜುಗರವಾಗಿತ್ತು.

Monday, December 1, 2008

ನಾಟಕ, ಶಬ್ದ, ಗುಣ ಇತ್ಯಾದಿ...



ಆಟಿಕೆ ಕೇಳಿದ ಮಗುವಿಗೆ ಆಟಿಕೆ ಅಂಗಡಿಯನ್ನೇ ಕೊಡಿಸಿದಂತೆ, ‘ಶಬ್ದಗುಣ’ದ ಎರಡು ಮತ್ತು ಮೂರನೇ ಸಂಚಿಕೆಗಳನ್ನು ಒಟ್ಟಿಗೇ ತಂದಿದ್ದಾರೆ ವಸಂತ ಬನ್ನಾಡಿ. ಈ ಅರೆವಾರ್ಷಿಕ ಪತ್ರಿಕೆಯ ಮೊದಲ ಸಂಚಿಕೆ ವರ್ಷಗಳ ಹಿಂದೇ ಬಂದಿತ್ತು. ಸಾಹಿತ್ಯ ಪತ್ರಿಕೆಗಳಿಗೆ ಇಂಥ ಬಾಲಗ್ರಹ ಸಹಜ ತಾನೆ.

ಮುಖ್ಯ ವ್ಯತ್ಯಾಸ: ಉಳಿದ ಪತ್ರಿಕೆಗಳು ಸಾಹಿತ್ಯವನ್ನು ಕೇಂದ್ರದಲ್ಲಿಟ್ಟುಕೊಂಡು ಬದುಕಿನ ಬಗ್ಗೆ ಚರ್ಚಿಸುತ್ತವೆ. ಶಬ್ದಗುಣ ರಂಗಭೂಮಿಯನ್ನು ಪ್ರಧಾನವಾಗಿಟ್ಟುಕೊಂಡು ಸಾಹಿತ್ಯ, ಬದುಕಿನ ಸುತ್ತ ಸುತ್ತುತ್ತದೆ. ಸಂಚಿಕೆಗಳು ರಂಗಭೂಮಿ ವಿಚಾರಗಳಿಂದ ತುಂಬಿ ಹೋಗಿವೆ. ಬನ್ನಾಡಿ ನಿರ್ದೇಶಕ ಕೂಡ. ಹಾಗಾಗಿ ಪತ್ರಿಕೆಯನ್ನು ‘ನಾಟಕೀಯವಾಗಿ’ ತಂದಿದ್ದಾರೆ ಎನ್ನಲಡ್ಡಿಯಿಲ್ಲ.

ಎರಡನೇ ಸಂಚಿಕೆಯಲ್ಲಿ ಕೆ.ವಿ.ತಿರುಮಲೇಶರ ಸಂದರ್ಶನ ಎರಡನೇ ಭಾಗವಿದೆ. ಸಾಮಾನ್ಯವಾಗಿ ಸಂದರ್ಶಿತ ವ್ಯಕ್ತಿಗಳು ಓದುಗನಿಂದ ಅಂತರ ಕಾಪಾಡಿಕೊಂಡು ಪ್ರವಾದಿಯ ಸ್ಥಾನದಲ್ಲಿ ನಿಲ್ಲುವುದು ವಾಡಿಕೆ. ಆದರೆ ತಮ್ಮ ಪದಮೋಹ, ಕಾಫ್ಕಾ ಜಗತ್ತು, ಅಲೆಮಾರಿತನ ಇತ್ಯಾದಿ ‘ಕಾಷ್ಠವ್ಯಸನ’ಗಳ ಬಗ್ಗೆ ಮಾತನಾಡಿರುವ ತಿರುಮಲೇಶ್ ಆ ಕಾರಣಕ್ಕೇ ಇಷ್ಟವಾಗುತ್ತಾರೆ.
ವೇದಿಕೆಯ ಮೇಲೆ ಪಾತ್ರಗಳನ್ನು ಕಳುಹಿಸಿ ರಂಗದ ಹಿಂದೆ ಉಳಿಯುವ ನಿರ್ದೇಶಕರ ದರ್ಶನ ನಮಗೆ ದೊರೆಯುವುದು ಕಡಿಮೆ. ಹೀಗಾಗಿ ಇವರು ಯಾವತ್ತೂ ನಮಗೆ ನಿಗೂಢ. ಈ ಸಂಚಿಕೆಗಳಲ್ಲಿ ಇಂಥ ಮೂವರು ನಿರ್ದೇಶಕ ಜೀವಿಗಳ ನಿಗೂಢದ ತೆರೆ ಸರಿದಿದೆ. ಪ್ರಸನ್ನ, ಸುರೇಶ ಆನಗಳ್ಳಿ, ಗೋಪಾಲಕೃಷ್ಣ ನಾಯಿರಿ ಅವರ ವಿಸ್ತೃತ ಸಂದರ್ಶನಗಳು, ವಿವರಗಳ ಮೂಲಕ ಅವರ ಕಾಣ್ಕೆಗಳು ನಮಗೂ ದಕ್ಕುತ್ತವೆ.
ಪ್ರಸನ್ನ ಜತೆಗೆ ರಾಜಶೇಖರ ನಡೆಸಿದ ಸಂವಾದ ರಂಗಭೂಮಿಯನ್ನು ನೆಪವಾಗಿಟ್ಟುಕೊಂಡು ಸಮಕಾಲೀನ ಬದುಕಿನ ಮೇಲೆ ಹಾಯಿಸಿದ ಫ್ಲಾಶ್‌ಲೈಟ್. ರಂಗ ಚಳುವಳಿಗಳು, ಸಮುದಾಯದ ಆಶಯ, ನಿರಾಶೆ, ಗೆಲಿಲಿಯೋ, ಸಾಮಾಜಿಕ ಕಾಳಜಿ, ಹೆಗ್ಗೋಡು, ಚರಕ, ದೇಸೀ ಜೀವನ- ಎಲ್ಲವೂ ಮಾತಿನಲ್ಲಿ ಹೊಳಪು ಪಡೆಯುವ ಬಗೆ ವಿಶಿಷ್ಟ.
‘ತೇಜಸ್ವಿಯವರ ಕಾವ್ಯ ಮೀಮಾಂಸೆ’ಯ ಬಗ್ಗೆ ಡಿ.ಎಸ್.ನಾಗಭೂಷಣರ ತಲಸ್ಪರ್ಶಿ ಲೇಖನ ಸಂಚಿಕೆ ಮೂರರಲ್ಲಿದೆ. ತೇಜಸ್ವಿ ಕಥನಗಾರಿಕೆಯೇ ಅವರ ಕಾವ್ಯ ಮೀಮಾಂಸೆಯೂ ಆಗಿತ್ತು ಎಂದು ಪ್ರತಿಪಾದಿಸುತ್ತ, ಜನಪರ ಚಳುವಳಿಗಳ ಉತ್ಥಾನ- ಅವಸಾನಗಳನ್ನು ತೇಜಸ್ವಿ ಕಥನಕ್ಕೆ ಲಿಂಕ್ ಮಾಡಿ ಒರೆಗೆ ಹಚ್ಚಿರುವುದು ಕುತೂಹಲ ಮೂಡಿಸುತ್ತದೆ.
ಉಳಿದಂತೆ ದಂಡಿಯಾಗಿ ಹೊಸ ಕವಿತೆಗಳು, ಸಂಚಿಕೆಗೊಂದು ಕತೆ, ನಾಟಕ. ನಿಮಗಿಷ್ಟವಾದೀತು.