![](https://blogger.googleusercontent.com/img/b/R29vZ2xl/AVvXsEifsYT5uSrvxwn7vIWKAcJNlzCVLWDDVqASR1lLTD7RRYEGGMYYg4Znp-Abt9afsByBaeO9f-22QxQS3nA_nIoqkWjBjDMsJHpLGx4CETFiLaHyEqDsZgq7or5-HujQ-JcaPmO5Ic4o4ozV/s320/book-1.jpg)
ಆಟಿಕೆ ಕೇಳಿದ ಮಗುವಿಗೆ ಆಟಿಕೆ ಅಂಗಡಿಯನ್ನೇ ಕೊಡಿಸಿದಂತೆ, ‘ಶಬ್ದಗುಣ’ದ ಎರಡು ಮತ್ತು ಮೂರನೇ ಸಂಚಿಕೆಗಳನ್ನು ಒಟ್ಟಿಗೇ ತಂದಿದ್ದಾರೆ ವಸಂತ ಬನ್ನಾಡಿ. ಈ ಅರೆವಾರ್ಷಿಕ ಪತ್ರಿಕೆಯ ಮೊದಲ ಸಂಚಿಕೆ ವರ್ಷಗಳ ಹಿಂದೇ ಬಂದಿತ್ತು. ಸಾಹಿತ್ಯ ಪತ್ರಿಕೆಗಳಿಗೆ ಇಂಥ ಬಾಲಗ್ರಹ ಸಹಜ ತಾನೆ.
ಮುಖ್ಯ ವ್ಯತ್ಯಾಸ: ಉಳಿದ ಪತ್ರಿಕೆಗಳು ಸಾಹಿತ್ಯವನ್ನು ಕೇಂದ್ರದಲ್ಲಿಟ್ಟುಕೊಂಡು ಬದುಕಿನ ಬಗ್ಗೆ ಚರ್ಚಿಸುತ್ತವೆ. ಶಬ್ದಗುಣ ರಂಗಭೂಮಿಯನ್ನು ಪ್ರಧಾನವಾಗಿಟ್ಟುಕೊಂಡು ಸಾಹಿತ್ಯ, ಬದುಕಿನ ಸುತ್ತ ಸುತ್ತುತ್ತದೆ. ಸಂಚಿಕೆಗಳು ರಂಗಭೂಮಿ ವಿಚಾರಗಳಿಂದ ತುಂಬಿ ಹೋಗಿವೆ. ಬನ್ನಾಡಿ ನಿರ್ದೇಶಕ ಕೂಡ. ಹಾಗಾಗಿ ಪತ್ರಿಕೆಯನ್ನು ‘ನಾಟಕೀಯವಾಗಿ’ ತಂದಿದ್ದಾರೆ ಎನ್ನಲಡ್ಡಿಯಿಲ್ಲ.
ಎರಡನೇ ಸಂಚಿಕೆಯಲ್ಲಿ ಕೆ.ವಿ.ತಿರುಮಲೇಶರ ಸಂದರ್ಶನ ಎರಡನೇ ಭಾಗವಿದೆ. ಸಾಮಾನ್ಯವಾಗಿ ಸಂದರ್ಶಿತ ವ್ಯಕ್ತಿಗಳು ಓದುಗನಿಂದ ಅಂತರ ಕಾಪಾಡಿಕೊಂಡು ಪ್ರವಾದಿಯ ಸ್ಥಾನದಲ್ಲಿ ನಿಲ್ಲುವುದು ವಾಡಿಕೆ. ಆದರೆ ತಮ್ಮ ಪದಮೋಹ, ಕಾಫ್ಕಾ ಜಗತ್ತು, ಅಲೆಮಾರಿತನ ಇತ್ಯಾದಿ ‘ಕಾಷ್ಠವ್ಯಸನ’ಗಳ ಬಗ್ಗೆ ಮಾತನಾಡಿರುವ ತಿರುಮಲೇಶ್ ಆ ಕಾರಣಕ್ಕೇ ಇಷ್ಟವಾಗುತ್ತಾರೆ.
ವೇದಿಕೆಯ ಮೇಲೆ ಪಾತ್ರಗಳನ್ನು ಕಳುಹಿಸಿ ರಂಗದ ಹಿಂದೆ ಉಳಿಯುವ ನಿರ್ದೇಶಕರ ದರ್ಶನ ನಮಗೆ ದೊರೆಯುವುದು ಕಡಿಮೆ. ಹೀಗಾಗಿ ಇವರು ಯಾವತ್ತೂ ನಮಗೆ ನಿಗೂಢ. ಈ ಸಂಚಿಕೆಗಳಲ್ಲಿ ಇಂಥ ಮೂವರು ನಿರ್ದೇಶಕ ಜೀವಿಗಳ ನಿಗೂಢದ ತೆರೆ ಸರಿದಿದೆ. ಪ್ರಸನ್ನ, ಸುರೇಶ ಆನಗಳ್ಳಿ, ಗೋಪಾಲಕೃಷ್ಣ ನಾಯಿರಿ ಅವರ ವಿಸ್ತೃತ ಸಂದರ್ಶನಗಳು, ವಿವರಗಳ ಮೂಲಕ ಅವರ ಕಾಣ್ಕೆಗಳು ನಮಗೂ ದಕ್ಕುತ್ತವೆ.
ಪ್ರಸನ್ನ ಜತೆಗೆ ರಾಜಶೇಖರ ನಡೆಸಿದ ಸಂವಾದ ರಂಗಭೂಮಿಯನ್ನು ನೆಪವಾಗಿಟ್ಟುಕೊಂಡು ಸಮಕಾಲೀನ ಬದುಕಿನ ಮೇಲೆ ಹಾಯಿಸಿದ ಫ್ಲಾಶ್ಲೈಟ್. ರಂಗ ಚಳುವಳಿಗಳು, ಸಮುದಾಯದ ಆಶಯ, ನಿರಾಶೆ, ಗೆಲಿಲಿಯೋ, ಸಾಮಾಜಿಕ ಕಾಳಜಿ, ಹೆಗ್ಗೋಡು, ಚರಕ, ದೇಸೀ ಜೀವನ- ಎಲ್ಲವೂ ಮಾತಿನಲ್ಲಿ ಹೊಳಪು ಪಡೆಯುವ ಬಗೆ ವಿಶಿಷ್ಟ.
‘ತೇಜಸ್ವಿಯವರ ಕಾವ್ಯ ಮೀಮಾಂಸೆ’ಯ ಬಗ್ಗೆ ಡಿ.ಎಸ್.ನಾಗಭೂಷಣರ ತಲಸ್ಪರ್ಶಿ ಲೇಖನ ಸಂಚಿಕೆ ಮೂರರಲ್ಲಿದೆ. ತೇಜಸ್ವಿ ಕಥನಗಾರಿಕೆಯೇ ಅವರ ಕಾವ್ಯ ಮೀಮಾಂಸೆಯೂ ಆಗಿತ್ತು ಎಂದು ಪ್ರತಿಪಾದಿಸುತ್ತ, ಜನಪರ ಚಳುವಳಿಗಳ ಉತ್ಥಾನ- ಅವಸಾನಗಳನ್ನು ತೇಜಸ್ವಿ ಕಥನಕ್ಕೆ ಲಿಂಕ್ ಮಾಡಿ ಒರೆಗೆ ಹಚ್ಚಿರುವುದು ಕುತೂಹಲ ಮೂಡಿಸುತ್ತದೆ.
ಉಳಿದಂತೆ ದಂಡಿಯಾಗಿ ಹೊಸ ಕವಿತೆಗಳು, ಸಂಚಿಕೆಗೊಂದು ಕತೆ, ನಾಟಕ. ನಿಮಗಿಷ್ಟವಾದೀತು.
1 comment:
ಶಬ್ದಗುಣ ಚೆನ್ನಾಗಿ ಬರ್ತಿದೆ ಹರೀಶ್. ನಿಮ್ಮ ಲೇಖನವೂ ಚುಟುಕಾಗಿದ್ದರೂ ಪರಿಪೂರ್ಣ ಪರಿಚಯವನ್ನೇ ನೀಡಿದೆ.
Post a Comment